ಬುಧವಾರ, ಏಪ್ರಿಲ್ 18, 2012
ಕಥೆ:ಪೇಟೆ-೧
ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗೆ ಹೋಗಿರಬಹುದೇನೋ.ಆದರೆ ಇಂದು ಮಂಜ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅವನು ಪ್ರಾರ್ಥಿಸಿದ ಸಕಲದೇವರ ಅನುಗ್ರಹವೆಂಬಂತೆ ಪೇಟೆಗೆ ಹೋಗುವ ಸುಯೋಗ ಒದಗಿತ್ತು.
ಆ ದಿನ ಬೆಳಿಗ್ಗೆ ನಂಜೇಗೌಡರು ಮಂಜನ ತಂದೆ ಸಿದ್ದನ ಬಳಿ 'ಏ ಸಿದ್ದ ಇವತ್ತು ಸಾಯಂಕಾಲಕ್ಕೆ ಮೋಟರಿಗೆ ಡೀಸೆಲ್ ತರಕೋಗ್ಬೇಕು.ಬೈಕಲಿ ಕ್ಯಾನ್ ಇಡಕಂಡ್ ಬರಕಾಗಲ್ಲ,ಮಂಜ್ ನ ಕಳ್ಸು'ಎಂದು ಹೇಳಿದರು.ಈ ಸುದ್ದಿ ಕೇಳಿದಾಗಿನಿಂದ ಮಂಜ ನಿಂತಲ್ಲಿ ನಿಲ್ಲದವನಾಗಿದ್ದ.ಶಾಲೆಯ ಸಮವಸ್ತ್ರವನ್ನು ತೊಟ್ಟು,ತಲೆಗೊಂದು ಯಾರೋ ಕೊಟ್ಟ 'ಪಲ್ಸ್ ಪೋಲಿಯೋ ಭಾನುವಾರ'ಎಂದು ಬರೆದ ಕ್ಯಾಪನ್ನು ಹಾಕಿದ್ದ.ಅವನ ಬಳಿ ಇದ್ದ ಬಟ್ಟೆಗಳಲ್ಲಿ ಶಾಲೆಯ ಸಮವಸ್ತ್ರವೊಂದೇ ತಕ್ಕ ಮಟ್ಟಿಗೆ ಬಣ್ಣ ಮತ್ತು ಶುದ್ದತೆಯ ದೃಷ್ಟಿಯಿಂದ ಚೆನ್ನಾಗಿದದ್ದು.ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆ ಕಾಣಲಿ ಎಂದು ಆಗಾಗ ಕ್ಯಾಪನ್ನು ತೆಗೆದು ಕೈಯಲ್ಲಿ ಸವರಿಕೊಳ್ಳುತ್ತಿದ್ದ.ನಂಜೇಗೌಡರೊಡನೆ ಮಂಜ ಬೈಕಿನಲ್ಲಿ ಹೊರಟಾಗ ಆಗಿನ್ನೂ ಕತ್ತಲಾಗುತ್ತಿತ್ತು.ಮೋಡ ಮುಸುಕಿದ್ದರಿಂದ ಸ್ಪಲ್ಪ ಮುಂಚೆಯೇ ಕತ್ತಲಾದಂತೇ ತೋರುತಿತ್ತು.ಬೆಟ್ಟದೂರದಿಂದ ಹೊರಟ್ಟರೆ ಚಿಕ್ಕಮಗಳೂರು ಪೇಟೆ ತಲುಪುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಕಾಫಿತೋಟ ಹಲವಾರು ಮೈಲಿಗಳವರೆಗೂ ವ್ಯಾಪಿಸಿದೆ.ನಂಜೇಗೌಡರು ಮಳೆ ಬರುವ ಮೊದಲು ಪೇಟೆಯನ್ನು ಸೇರಬೇಕೆಂಬ ತರಾತುರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.ನಂಜೇಗೌಡರ ಬೈಕಿನ ಕರ್ಕಶ ಧ್ವನಿ ಮೌನವಾಗಿದ್ದ ಪರಿಸರವನ್ನು ಪ್ರವೇಶಿಸುತ್ತಿದಂತೆ ವಿವಿಧ ಬಗ್ಗೆಯ ಪಕ್ಷಿಗಳು ಹಾರಿಹೋದವು.ಅಕ್ಷಯ ಕಾನನದ ಯಾವುದೋ ಮೂಲೆಯಲ್ಲಿ ಕಳ್ಳಭಟ್ಟಿ ಬೇಯಿಸುತ್ತಿದ್ದ ಕೆಲವರು ಕೆಲಕಾಲ ಗಾಬರಿಗೊಂಡರು.ಬೈಕಿನ ಕರ್ಕಶಧ್ವನಿ ಅವರ ಕೇಳುವಿಕೆಯ ವ್ಯಾಪ್ತಿಯನ್ನೂ ದಾಟಿ ಮುಂದೆ ಹೋದಾಗ ನಿರಾಳರಾದರು.ನಂಜೇಗೌಡರಿಗೆ ಇದ್ದು ಯಾವುದರ ಪರಿವೇ ಇರಲಿಲ್ಲ.ಪೇಟೆಯಿಂದ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಯೋಚಿಸುತ್ತಾ,ಅದೇ ಗುಂಗಿನಲ್ಲಿ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದರು.ಆದರೆ ಅವರ ಬೈಕು ಮಾತ್ರ ತನ್ನ ಕರ್ಕಶ ಮಾರ್ದನಿಯಿಂದ ಸುತ್ತಲ್ಲಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿ,ತಾನು ಹೋದಲೆಲ್ಲಾ ಪರಿಸರದ ಗಮನವನ್ನು ಸೆಳೆಯುತ್ತಿತ್ತು.ರಸ್ತೆಬದ್ದಿಯ ತೋಟದಲ್ಲಿ ಹಲಸಿನಹಣ್ಣು ಕದಿಯಲು ಬಂದಿದ್ದ ಹಳ್ಳಿಯ ಹುಡುಗರು ಬೈಕಿನ ಆಕ್ರಂದನವನ್ನು ಕೇಳಿ,ತೋಟದ ಮಾಲಿಕರು ಬಂದರೆಂದು ಹಣ್ಣನ್ನು ಅಲ್ಲೆ ಎಸೆದು ಪರಾರಿಯಾದರು.ಚೋರಕ್ಕಿಗೆ ಗುರಿಯಿಟ್ಟು ಅಣಿಯಾಗುತ್ತಿದ್ದ ಆ ತೋಟದ ಹುಡುಗ ಚಾಟರಿಬಿಲ್ಲು ಬೀಸುವ ಮೊದಲೇ ಬೈಕಿನ ಆರ್ಭಟಕ್ಕೆ ಚೋರಕ್ಕಿ ಹಾರಿ ಹೋಯಿತು.-ಹೀಗೆ ಸುತ್ತಲಿನ ಪ್ರಕೃತಿಯ ತಪ್ಪಸಿಗೆ ಭಂಗ ತರುತ್ತ ಬೈಕು ಮುಂದುವರೆಯಿತು.
ಅಷ್ಟರಲ್ಲಿ ಸಣ್ಣಗೆ ಮಳೆ ಪ್ರಾರಂಭವಾಯಿತು.ಸಣ್ಣಗೆ ಪ್ರಾರಂಭವಾದ ಮಳೆ ಬರಬರುತ್ತಾ ರಭಸವಾಗಿ ಸುರಿಯಲಾರಂಬಿಸಿತ್ತು.ನಂಜೇಗೌಡರು ಮಳೆಗೆ ಜರ್ಕೀನ್ ಹಾಕಿಕೊಂಡಿದರು.ಆದರೆ ಮಂಜ ನೆನೆದು ತೊಪ್ಪೆಯಾಗಿ ಹೋಗಿದ್ದ.ಮಂಜನ ಕ್ಯಾಪ್ ಹಾಕಿದ್ದ ತಲೆಯಿಂದ ಎಣ್ಣೆಮಿಶ್ರಿತ ಮಳೆಹನಿಗಳು ಮುತ್ತಿನ ಮಣಿಗಳಂತೆ ಮುಖದ ಮೇಲೆ ಜಾರುತ್ತಿದ್ದವು.ಆದರೆ ಮಂಜನಿಗೆ ಈ ಯಾವುದರ ಪರಿವೆಯೂ ಇರಲಿಲ್ಲ.ಅವನು ಪೇಟೆಯ ವೈಭವಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ.ಪೇಟೆಯ ಬೀದಿ ಬದಿಯ ಬೇಕರಿಗಳಲ್ಲಿ ಬಣ್ಣದ,ರುಚಿಯಾದ ತಿಂಡಿಗಳು.ಸದಾಕಾಲ ಬಿಡುವಿಲ್ಲದೇ ಚಲಿಸುವ ವಾಹನಗಳು,ಬಣ್ಣಬಣ್ಣದ ಉಡುಪು ತೊಟ್ಟಜನಗಳು-ಇದೆಲ್ಲದರ ಬಗ್ಗೆ ತಮ್ಮೂರಿನ ಜನಗಳ ಬಳಿ ಕೇಳಿ ಅಚ್ಚರಿ ಪಟ್ಟಿದ.ಅದಕ್ಕಿಂತಲೂ ಮುಖ್ಯವಾಗಿ,ಬೆಟ್ಟದೂರಿನ ಯಾವುದೋ ಮೂಲೆಯಲ್ಲಿ ಇದ್ದ ಮಂಜನಿಗೆ ಕಾಡಿನ ಆ ಮೌನ,ಏಕಾಂತ,ಬೇಸರ ತರಿಸುತ್ತಿತ್ತು.ಅದಲ್ಲದೇ ತನ್ನ ಮೆಚ್ಚಿನ ಮೇಷ್ಟರು ಮನೆಯಿರುವುದು ಇದೇ ಪೇಟೆಯಲ್ಲೆ.ಬೆಟ್ಟದೂರಿನ ಮುರುಕಲುಶಾಲೆಯಿಂದ ವರ್ಗಾವಣೆಯಾದ ಮೇಲೆ ಮಂಜನಿಗೆ ಮೇಷ್ಟ್ರನ್ನು ನೋಡಲಾಗಿರಲಿಲ್ಲ.ಈಗ ಎಲ್ಲಾದರೂ ಕಂಡರೂ ಕಾಣಬಹುದೆಂಬ ಸಣ್ಣ ನಿರೀಕ್ಷೆಯು ಮಂಜನ ಮನದ ಮೂಲೆಯಲ್ಲಿತ್ತು.ಈ ಎಲ್ಲಾ ಸಂಭ್ರಮಗಳಿಂದಾಗಿ ಎಂಥಹ ಬಿರುಮಳೆಯು ಮಂಜನ ಗಮನಕ್ಕೆ ಬಂದಿರಲಿಲ್ಲ.
ಭಾನುವಾರ, ಜನವರಿ 8, 2012
ಆಶಯ
ಮತ್ತೆ ಬಂದಿದೆ ಹೊಸ ವರುಷ.
ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು.
ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು
ಮತ್ತೆ ಬಂದಿದೆ ಹೊಸ ವರುಷ.
ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆಯ ಜಗಕ್ಕೆ ಹರಡಲಿ.
ನಾಳೆ ಜೀವನಪ್ರೀತಿಯೇ ಮಳೆಯಾಗಿ ಸುರಿಯಲಿ. ಇಳೆಯಲ್ಲಿ ಜೀವಕಳೆ ತುಂಬಿ ತುಳುಕಲಿ.
ನಾಳೆ ಎಂಬ ನಾಳೆಯು ಬೇಗ ಬರಲಿ.
ಹೆಗಲೇರಿ ಕುಳಿತ ಕನಸುಗಳ ನಿರಾಸೆಗೊಳಿಸದಿರಲಿ. ಮತ್ತದೇ ಏಕತಾನತೆ ಬದುಕ ಆವರಿಸದಿರಲಿ.
ಮಂಕು ಕವಿದ ಗುಡಿಸಲಿಗೆ ಬೆಳಕ ತರಲಿ. ಬಂಗಲೆಯ ಗೋಡೆಗಳ ನಡುವೆ ಬದುಕು ಕಳೆದುಹೋಗದಿರಲಿ. ನಾಳೆ ಬೇಗ ಬರಲಿ. ಹೊಸತು ಬೆಳಕ ತರಲಿ
ಭಾನುವಾರ, ಅಕ್ಟೋಬರ್ 30, 2011
ಮಲೆನಾಡ ಹುಡುಗಿಯರು
ಮಲೆನಾಡಿನ ಹುಡುಗಿಯರು,
ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು,
ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ,ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು,
ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ್ದೆಗಿಳಿದು ಕಳೆಯ ಕೀಳುವವರು,
ಕೈಯಲ್ಲಿ ಪುಸ್ತಕವ ಹಿಡಿದು ಕಣದಿ ಹರಡಿದ ಕಾಫಿ ಬೇಳೆಯ ಮೇಲೆ ಕಾಲಾಡಿಸುತ್ತಾ,ಪರೀಕ್ಷೆಗೆ ಓದಿಕೊಳ್ಳುವವರು,
ಇವರು ಗಂಭೀರವದನೆಯರು,ಚೆಲುಚೆಲುಚೆಲುವಿಯರು,ಗಯ್ಯಾಳಿ ಮಾಯಾಂಗನೆಯರು,
ಕೋಮಲೆಯರು,ಸಣ್ಣಮಾತಿಗೆಲ್ಲಾ ಕಣ್ಣ, ನೀರಕೊಳವಾಗಿಸುವವರು
ನಾಚುತ್ತಾತಲೆತಗಿಸಿ ಓದಲು ಬರುವ,ಇವರ ಕೆಣಕಿದರೇ ಆಗುವರು ಕಿರಗೂರಿನ ಗಯ್ಯಾಳಿಗಳು
ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು,
ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ,ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು,
ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ್ದೆಗಿಳಿದು ಕಳೆಯ ಕೀಳುವವರು,
ಕೈಯಲ್ಲಿ ಪುಸ್ತಕವ ಹಿಡಿದು ಕಣದಿ ಹರಡಿದ ಕಾಫಿ ಬೇಳೆಯ ಮೇಲೆ ಕಾಲಾಡಿಸುತ್ತಾ,ಪರೀಕ್ಷೆಗೆ ಓದಿಕೊಳ್ಳುವವರು,
ಇವರು ಗಂಭೀರವದನೆಯರು,ಚೆಲುಚೆಲುಚೆಲುವಿಯರು,ಗಯ್ಯಾಳಿ ಮಾಯಾಂಗನೆಯರು,
ಕೋಮಲೆಯರು,ಸಣ್ಣಮಾತಿಗೆಲ್ಲಾ ಕಣ್ಣ, ನೀರಕೊಳವಾಗಿಸುವವರು
ನಾಚುತ್ತಾತಲೆತಗಿಸಿ ಓದಲು ಬರುವ,ಇವರ ಕೆಣಕಿದರೇ ಆಗುವರು ಕಿರಗೂರಿನ ಗಯ್ಯಾಳಿಗಳು
ಮಂಗಳವಾರ, ಜೂನ್ 14, 2011
ಪ್ರಾರ್ಥನೆ
ದೋ ಎಂದು ಸುರಿದರೇ ಹಾಳು ಮಳೆ ಎನ್ನುವ
ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ
ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ
ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು
ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು
ನಿನಗೆ ತಿಳಿಯದೇ ಮಳೆಯ ಲೆಕ್ಕ?
ನಮ್ಮ ಪ್ರಾರ್ಥನೆ ಇಷ್ಟೆ.
ನೋಡಿ ಬಾರಯ್ಯ ವರುಣ
ಜೀವದ ಮೇಲಿರಲಿ ಕರುಣ
ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ
ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ
ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು
ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು
ನಿನಗೆ ತಿಳಿಯದೇ ಮಳೆಯ ಲೆಕ್ಕ?
ನಮ್ಮ ಪ್ರಾರ್ಥನೆ ಇಷ್ಟೆ.
ನೋಡಿ ಬಾರಯ್ಯ ವರುಣ
ಜೀವದ ಮೇಲಿರಲಿ ಕರುಣ
ಶುಕ್ರವಾರ, ಮೇ 13, 2011
ಮಂಗಳವಾರ, ಏಪ್ರಿಲ್ 12, 2011
ಕವಿಯಾಗಬೇಕೆಂದರೆ
'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲಿನ ಜಗತ್ತನ್ನು ಗಮನಿಸುತಿರಬೇಕು ಎಂದಿರಬಹುದೇ?ಅಥವಾ ಬರೆದ ಬರಹ ಅಥವಾ ಕವಿತೆಯೊಂದನ್ನು ಕೇಳಲು ಕೇಳುಗರಿರಬೇಕೆಂಬುದು ಇದರ ಅರ್ಥವೆ?
ನಮ್ಮ ನಾಡಿನ ಕವಿಗಳ ಜೀವನ ಚರಿತ್ರೆಗಳನ್ನು ಓದಿದಾಗ ತಿಳಿಯುದೇನೆಂದರೆ ಅವರೆಲ್ಲಾ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುತ್ತಿದರು.ಮತ್ತು ಅವರ ಗೀಚಿದನೆಲ್ಲ ಕೇಳಿ ಪ್ರೋತ್ಸಾಹಿಸುವವರು ಇದ್ದರು.ತಾ.ರಾ.ಸು.ರವರು ಪುಸ್ತಕ ಓದಲೆಂದೇ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದರಂತೆ.ತಾ.ರಾ.ಸು.ರವರ ಸಂಬಂದಿಕರಾದ ವೆಂಕಣಯ್ಯನವರು ತಾ.ರಾ.ಸು.ರವರ ಓದುವ ಹವ್ಯಾಸವನ್ನು ಗುರುತಿಸಿ ಬೇರೆ ಯಾರಿಗೂ ಪ್ರವೇಶವಿರದ ತಮ್ಮ ಮನೆಯ ಗಂಥ್ರಾಲಯದ ಪುಸ್ತಕವನ್ನು ಓದಲು ಹೇಳಿದರು.
ಹಾಗೇಯೇ ಕುವೆಂಪುರವರು ಓದಲು ಮೈಸೂರಿಗೆ ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು.ಕುವೆಂಪುರವರು ಓದಬೇಕೆಂದುಕೊಂಡ ಪುಸ್ತಕ ಬೇರೆಯಾರದರೂ ಓದುತ್ತಿದರೆ,ಅವರು ಓದುವವರೆಗೆ ಕಾದು ನಂತರ ಓದುತ್ತಿದರು.ಅದೇ ಗ್ರಂಥಾಲಯದಲ್ಲಿ ಓದಿದ್ದ ವಿವೇಕಾನಂದ,ರಾಮಕಷ್ಣಪರಮಹಂಸ,ಶಾರದಮಾತೆಯವರ ಜೀವನ ಚರಿತ್ರೆ,ಕುವೆಂಪುರವರ ಬದುಕನ್ನೇ ಬದಲಾಯಿಸಿತು.ದೇಶ-ವಿದೇಶದ ಪ್ರಖ್ಯಾತ ಕವಿಗಳ ಕೃತಿಗಳ ಓದು,ಬೇರೆ ದೇಶದ ಜನಜೀವನವನ್ನು ಅರಿಯಲು ಸಹಾಯಕವಾಯಿತು.
ಸಾಹಿತ್ಯ ಎಂದರೆ ನಮ್ಮ ಅನುಭವ ಅಥವಾ ಭಾವನೆಯನ್ನು ಉಚಿತ ರೀತಿಯಲ್ಲಿ ದಾಖಲಿಸುವುದು.ಪುಸ್ತಕಗಳನ್ನು ಓದುವ ಮೂಲಕ,ಸುತ್ತಲಿನ ವಿದ್ಯಮಾನಗಳನ್ನು ಗಮನಿಸುವುದರಿಂದ ನಮ್ಮ ಭಾವಕೋಶ ಬೆಳೆಯುತ್ತದೆ.ಆ ಮೂಲಕ ಉತ್ತಮ ಸಾಹಿತ್ಯಸೃಷ್ಟಿ ಸಾಧ್ಯ.ಇನ್ನೂ ಕಥೆ ಕವನಗಳನ್ನು ಕೇಳುವ,ಪ್ರೋತ್ಸಾಹಿಸುವವರು ಈಗ ಕಡಿಮೆಯೆಂದೇ ಹೇಳಬಹುದು.ಕೇಳುಗರಲ್ಲದವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ.ಯಾಕೆಂದರೇ ಆನಂತರ ನಮ್ಮನ್ನು ನೋಡುವ ಅವರ ದೃಷ್ಟಿಯೇ ಬದಲಾಗಬಹುದು.ಕೇಳುಗರಿಲ್ಲದ ಕವನ ಮಂಕಾಗುತ್ತದೆ.ಆಗಷ್ಟೇ ಅರಳುತ್ತಿರುವ ಕವಿ ತೆರೆಮರೆಗೆ ಸರಿಯುತ್ತಾನೆ. ಓದುವ ಹವ್ಯಾಸವಿದ್ದು,ಬರೆದದ್ದನೆಲ್ಲಾ ಕೇಳುವ ಕೇಳುಗರಿದ್ದರೆ ಕವಿಗಳಾಗುವುದರಲ್ಲಿ ಸಂದೇಹವಿಲ್ಲ.
ಗುರುವಾರ, ಏಪ್ರಿಲ್ 7, 2011
ಭಾನುವಾರ, ಏಪ್ರಿಲ್ 3, 2011
ಮಲೆನಾಡಿನ ಬೆಳದಿಂಗಳ ರಾತ್ರಿ
ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ ಬಾವಲಿಗಳ ಹಿಂಡು ತಿಂಗಳ ಬೆಳಕಿನಲ್ಲಿ ಗೋಚರಿಸುತಿವೆ.ಈ ವಿದ್ಯಮಾನಗಳು ನಡೆಯುವ ವೇಳೆಯಲ್ಲೇ ಕೆಳಗೆ,ತುಂಬ ಕೆಳಗೆ ಬೆಂಕಿಯ ಜ್ವಾಲೆ ದಗದಗಿಸಿ ಉರಿಯುತ್ತಿದೆ.ಆ ದಗದಗಿಸುವ ಬೆಂಕಿಯ ಬೆಳಕು ಸುತ್ತಲೂ ಕುಳಿತು ಚಳಿ ಕಾಯಿಸುತ್ತಿರುವ ಮಂದಾಯ ಕಣ್ಣುಗಳಲ್ಲಿ ಪ್ರತಿಪಲಿಸುತ್ತಿದೆ.ಅಲ್ಲೆ ಬೆಂಕಿಯ ಒಂದು ಬದ್ದಿಯಲ್ಲಿ ನಾಯಿಯೊಂದು ಮುದುಡಿ ಮಲಗಿದೆ.ಕಾಡುಗತ್ತಲೆಯ ಗರ್ಭದೊಳಗಿಂದ ಜೀರುಂಡೆಗಳ ಜಿರ್ ಜಿರ್ ಸದ್ದು ಸನ್ನಿವೇಶಕ್ಕೆ ಹಿಮ್ಮೇಳವನ್ನು ಒದಗಿಸಿದೆ.ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಬೆಳಗಿ,ಮಸಿಗತ್ತಲೆಯ ನಡುವೆ ಬೆಳಕಿನ ಕಿಡಿಯನ್ನು ಸೋಕಿಸಿ ಬೆಳಕಿನ ಇರುವಿಕೆಯನ್ನು ಸಾರಿಸಾರಿ ಹೇಳುತಿದೆ.ಕಾನನದ ಯಾವುದೋ ಮೂಲೆಯಲ್ಲಿ ನರಿಯೊಂದು ಊಳಿಡುತ್ತಿದೆ.
ಮಂಗಟ್ಟೆಯ ದೆಸೆಯಿಂದ!
ಮಂಗಟ್ಟೆಹಕ್ಕಿ-ವಿಶೇಷವಾದ ಕೊಕ್ಕಿನಿಂದ,ಕೇಕೆಹಾಕಿ ಕೂಗುವ ದನಿಯಿಂದ,ಅದರ ಅದ್ಬುತವಾದ ಜೀವನಶೈಲಿಯಿಂದ ಕುತೂಹಲಕ್ಕೆ ಕಾರಣವಾದ ಹಕ್ಕಿ.ಮಂಗಟ್ಟೆಹಕ್ಕಿಗಳು ಇರುವಲ್ಲಿ ಜೀವವೈವಿದ್ಯ ಸಮೃದ್ದವಾಗಿರುತ್ತವಂತೆ.ಇವುಗಳು ಸಾಮಾನ್ಯವಾಗಿ ಜೋಡಿ,ಅಥವಾ ಗುಂಪುಗಳಲ್ಲಿ ಕಾಣಸಿಗುತ್ತವೆ.ಬೆಳಗಿನ ಜಾವ ನಮ್ಮ ಮನೆಯ ಪಕ್ಕದ ಗೋಣಿಮರದ ಮೇಲೆ ಕುಳಿತು ಒಂದು ಮಂಗಟ್ಟೆಹಕ್ಕಿ ಕೇಕೆಹಾಕತೊಡಗಿದರೆ,ಸ್ವಲ್ಪ ದೂರದಲ್ಲಿ ಮತ್ತೊಂದು ಮಂಗಟ್ಟೆ ಹಕ್ಕಿ,ಕೇಕೆ ಹಾಕಲು ಪ್ರಾರಂಭಿಸುತ್ತದೆ.ಒಂದರ ನಂತರ ಇನ್ನೊಂದರಂತೆ ಸರದಿಯಲ್ಲಿ ಕೇಕೆ ಹಾಕತೊಡಗುತ್ತವೆ.ಇವುಗಳು ಏನೂ ಸಂಭಾಷಣೆ ನಡೆಸುತ್ತಿರುತ್ತವೋ ಏನೋ.ಮಂಗಟ್ಟೆಯ ದನಿಯಂತೂ ತುಂಬ ದೂರದವರೆಗೂ ಕೇಳಿಸುತ್ತದೆ.ಇವುಗಳ ಸಂಭಾಷಣೆಗೆ ಹಿಮ್ಮೇಳವನ್ನು ನೀಡಲೆನ್ನೂವಂತೆ,ಕಾಡುಕೋಳಿಗಳು ಸಹ ಕೂಗತೊಡಗುತ್ತವೆ.ಮನೆಯ ಹಿಂದಿನ ಗೊಬ್ಬರದ ಗುಂಡಿಯ ಬಳಿ ಕೆದಕುತ್ತಿದೆ ಸಾಕುಕೋಳಿಗಳು ಗಾಬರಿಗೊಂಡು ಅರಚತೊಡಗುತ್ತದೆ.ನೋಡನೋಡುತ್ತಿದಂತೇ ಪರಿಸರ ಗಾಬರಿ-ಗದ್ದಲಗಳಿಂದ ತುಂಬಿ ಹೋಗುತ್ತವೆ.
ಶುಕ್ರವಾರ, ಮಾರ್ಚ್ 18, 2011
ಹೇಗೋ ಏನೋ ಇದೇ ನಾನು
ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ.
ನೀನು ಯಾವ ಮಾಯದಲ್ಲಿ ಮನವ ಸೇರಿದೆ.
ಬದುಕು ತಾನು ಸಾಗುತಿತ್ತು ಅದರ ಪಾಡಿಗೆ.
ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ.
ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ.
ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ.
ನನ್ನ ಬಾಳ ಒಲುಮೆ ನೀನು,
ನನ್ನ ಭಾವ ಚಿಲುಮೆ ನೀನು.
ಹೇಳು ನೀನು ಯಾರು ನಾನು ತಿಳಿಯದಾಗಿದೇ.
ಹೂವ ತುಟಿಯ ಜೇನಿನಂಥೆ.
ಮುದ್ದೂಮಗುವ ನಗುವಿನಂತೆ ಬಂದೇ ಬಾಳಿಗೆ,
ಹೇಗೊ ಏನೋ ಇದೇ ನಾನು ನನ್ನ ಪಾಡಿಗೆ.
ಕಡೆಗೆ ಕಾವ್ಯಸ್ಪೂರ್ತಿಯಾದೆ ಕಾವ್ಯಕನ್ನಿಕೆ.
ಕವಿಯು-ಚೆಲುವು
ವನಸಿರಿಯ ಚೆಲುವ ಸವಿದು,
ಮಲೆಯ ಅಲೆಯ ಸ್ಪರ್ಶ ಪಡೆದು,
ಕಾಡುಕಣಿವೆ ತಂಪು ಕುಡಿದು
ಕವಿಯು ಬರೆದ ಕವಿತೆಯ.
ಮಧುವ ಹೀರೋ ದುಂಬಿ ಕಂಡು,
ಜೇನಸವಿಯ ಸಿಹಿಯ ಉಂಡು,
ಹೊಂಗೆ ಮರಕ್ಕೆ ಒರಗಿ ಕೊಂಡು,
ಕವಿಯು ಬರೆದ ಕವಿತೆಯ.
ಕವಿತೆ ಎನಗೆ ಕೊಟ್ಟ ಕವಿಯು,
ಓದಿ ಜಗವ ಸವಿಯೋ ಎನುತ್ತ
ಹೆಸರ ಹೇಳದೇನೇ ಹೊರಟುಹೋದನು.
ಕವಿತೆಯನ್ನ ತೊದಲಿ ಓದಿ,
ಮತ್ತೆಮತ್ತೆ ಹಾಡಿಪಾಡಿ,
ಅರ್ಥ ಅರಿಯೇ ಕವಿತೆ ಕಾಡಿ,ಎಂಥ ಅದ್ಬುತ!.
ಹೊರಟುಹೋದ ಕವಿಯು ಬಂದ.
ಹೃದಯದೊಳಗೆ ಬಂದು ನಿಂತ.
ಸುಮದೊಳೀಗ ಎಷ್ಟು ಬಣ್ಣ.
ಹೊಂಗೆ ನೆರಳು ಎನಿತು ಚೆನ್ನ.
ಕವಿಯು ತಾನು ಜಗವ ಕಂಡು ಕವಿತೆ ಗೀಚಿದ.
ನಾನು ಕವಿತೆ ಓದಿಕೊಂಡು ಜಗವ ಕಂಡೆನು.
ಗುರುವಾರ, ಫೆಬ್ರವರಿ 24, 2011
ಕವಿಯು-ಚೆಲುವು
ವನಸಿರಿಯ ಚೆಲುವ ಕಂಡು,
ಮಲೆಯ ಅಲೆಯ ಸ್ಪರ್ಶ ಪಡೆದು,
ಕಾಡುಕಣಿವೆ ತಂಪು ಕುಡಿದು,
ಕವಿಯು ಬರೆದ ಕವಿತೆಯ.
ಮಧುವ ಹೀರುವ ದುಃಬಿಕಂಡು,
ಜೇನಸವಿಯ ಸಿಹಿಯ ಉಂಡು,
ಹೊಂಗೆ ಮರಕ್ಕೆ ಒರಗಿಕೊಂಡು,
ಕವಿಯು ಬರೆದ ಕವಿತೆಯ.
ಕವಿತೆ ಎನಗೆ ಕೊಟ್ಟ ಕವಿಯು,
ಓದಿ ಜಗವ ಸವಿಯೇ ಎನುತ್ತಾ
ಹೆಸರ ಹೇಳದೇನೇ ಹೊರಟು ಹೋದನು.
ಕವಿತೆಯನ್ನು ತೊದಲಿ ಓದಿ,
ಮತ್ತೆಮತ್ತೆ,ಹಾಡಿ-ಪಾಡಿ,
ಅರ್ಥಕಾಡೇ,ಎಂಥ ಅದ್ಬುತ!,
ಹೊರಟುಹೋದ ಕವಿಯು ಬಂದ,
ಹೃದಯದೊಳಗೆ ಬಂದು ನಿಂದ.
ಸುಮದೊಳೀಗ ಎಷ್ಟು ಬಣ್ಣ,
ಹೊಂಗೆ ನೆರಳು ಎನಿತು ಚೆನ್ನ.
ಕವಿಯು ತಾನು ಜಗವ ಕಂಡು ಕವಿತೆ ಗೀಚಿದ.
ನಾನು ಕವಿತೆ ಓದಿಕೊಂಡು ಜಗವ ಕಂಡೆನು.
ಭಾಗ್ಯವೆಂದರೇ ನಿನ್ನದೇ ಬಿಡು
ಓ ಮರಿಹಕ್ಕಿಯೇ
ಭಾಗ್ಯವೆಂದರೇ ನಿನ್ನದೇ ಬಿಡು.
ತೋಟದಿಂದ ತೋಟಕ್ಕೆ,
ಮರದಿಂದ ಮರಕ್ಕೆ,
ಕೊಂಬೆಯಿಂದ ಕೊಂಬೆಗೆ ಹಾರಿ,
ಬಗೆಬಗೆಯ ಹೂಮಕರಂಧವ ಹೀರಿ,
ಅಡೆತಡೆಯಿಲ್ಲದೇ ಏರಿಳಿಯುವ;
ಭಾಗ್ಯವೆಂದರೇ ನಿನ್ನದೇ ಬಿಡು.
ದೇಶಕಾಲದ ಪರಿವೇ ಇಲ್ಲದೇ,
ಗಡಿ,ಗಡಿಯಾರದ ಕಡಿವಾಣವೇ ಇಲ್ಲದೇ,
ಜಾತಿ ಧರ್ಮದ ಗೊಡವೆಯೇ ಇಲ್ಲದ
ಭಾಗ್ಯವೆಂದರೇ ನಿನ್ನದೆ ಬಿಡು.
ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ!
ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ,ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು,ಹಿಂದೆ ನಡೆದ ಹಗರಣಗಳತ್ತ ಬೊಟ್ಟು ಮಾಡಿ,ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಹೆಗ್ಗಣವಲ್ಲ ಎಂದು ನಂಬಿಸಲು ಹೊರಟಿದ್ದಾರೆ.ಇವರೇನ್ನೂ ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?.ಕಣ್ಣಮುಂದೆಯೇ ಅನ್ಯಾಯ ತಂಡಾವವಾಡುತ್ತಿದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಾಮಾನ್ಯನಿದ್ದರೆ, ನಾಡಿನ ರಕ್ಷಣೆಗೆ ಮುಂದಾಗುವ ಪ್ರಾಮಾಣಿಕ ನಾಯಕರ ಕೊರತೆ ಮತ್ತೊಂದೆಡೆ.ಈ ಸಂದರ್ಭದಲ್ಲಿ ಬುದ್ದಿಜೀವಿಗಳು,ಕನ್ನಡ ಹೋರಾಟಗಾರರು,ಮೌನವಹಿಸಿರುವುದು ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳುವಂತೇ ಮಾಡಿದೆ.ಜನರು ತಮ್ಮ ಪ್ರಜಾಶಕ್ತಿಯನ್ನು ಅರಿತು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವ ಅಗತ್ಯವಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)


