ಮಂಗಳವಾರ, ಏಪ್ರಿಲ್ 12, 2011

ಕವಿಯಾಗಬೇಕೆಂದರೆ

'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲಿನ ಜಗತ್ತನ್ನು ಗಮನಿಸುತಿರಬೇಕು ಎಂದಿರಬಹುದೇ?ಅಥವಾ ಬರೆದ ಬರಹ ಅಥವಾ ಕವಿತೆಯೊಂದನ್ನು ಕೇಳಲು ಕೇಳುಗರಿರಬೇಕೆಂಬುದು ಇದರ ಅರ್ಥವೆ? ನಮ್ಮ ನಾಡಿನ ಕವಿಗಳ ಜೀವನ ಚರಿತ್ರೆಗಳನ್ನು ಓದಿದಾಗ ತಿಳಿಯುದೇನೆಂದರೆ ಅವರೆಲ್ಲಾ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುತ್ತಿದರು.ಮತ್ತು ಅವರ ಗೀಚಿದನೆಲ್ಲ ಕೇಳಿ ಪ್ರೋತ್ಸಾಹಿಸುವವರು ಇದ್ದರು.ತಾ.ರಾ.ಸು.ರವರು ಪುಸ್ತಕ ಓದಲೆಂದೇ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದರಂತೆ.ತಾ.ರಾ.ಸು.ರವರ ಸಂಬಂದಿಕರಾದ ವೆಂಕಣಯ್ಯನವರು ತಾ.ರಾ.ಸು.ರವರ ಓದುವ ಹವ್ಯಾಸವನ್ನು ಗುರುತಿಸಿ ಬೇರೆ ಯಾರಿಗೂ ಪ್ರವೇಶವಿರದ ತಮ್ಮ ಮನೆಯ ಗಂಥ್ರಾಲಯದ ಪುಸ್ತಕವನ್ನು ಓದಲು ಹೇಳಿದರು. ಹಾಗೇಯೇ ಕುವೆಂಪುರವರು ಓದಲು ಮೈಸೂರಿಗೆ ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು.ಕುವೆಂಪುರವರು ಓದಬೇಕೆಂದುಕೊಂಡ ಪುಸ್ತಕ ಬೇರೆಯಾರದರೂ ಓದುತ್ತಿದರೆ,ಅವರು ಓದುವವರೆಗೆ ಕಾದು ನಂತರ ಓದುತ್ತಿದರು.ಅದೇ ಗ್ರಂಥಾಲಯದಲ್ಲಿ ಓದಿದ್ದ ವಿವೇಕಾನಂದ,ರಾಮಕಷ್ಣಪರಮಹಂಸ,ಶಾರದಮಾತೆಯವರ ಜೀವನ ಚರಿತ್ರೆ,ಕುವೆಂಪುರವರ ಬದುಕನ್ನೇ ಬದಲಾಯಿಸಿತು.ದೇಶ-ವಿದೇಶದ ಪ್ರಖ್ಯಾತ ಕವಿಗಳ ಕೃತಿಗಳ ಓದು,ಬೇರೆ ದೇಶದ ಜನಜೀವನವನ್ನು ಅರಿಯಲು ಸಹಾಯಕವಾಯಿತು. ಸಾಹಿತ್ಯ ಎಂದರೆ ನಮ್ಮ ಅನುಭವ ಅಥವಾ ಭಾವನೆಯನ್ನು ಉಚಿತ ರೀತಿಯಲ್ಲಿ ದಾಖಲಿಸುವುದು.ಪುಸ್ತಕಗಳನ್ನು ಓದುವ ಮೂಲಕ,ಸುತ್ತಲಿನ ವಿದ್ಯಮಾನಗಳನ್ನು ಗಮನಿಸುವುದರಿಂದ ನಮ್ಮ ಭಾವಕೋಶ ಬೆಳೆಯುತ್ತದೆ.ಆ ಮೂಲಕ ಉತ್ತಮ ಸಾಹಿತ್ಯಸೃಷ್ಟಿ ಸಾಧ್ಯ.ಇನ್ನೂ ಕಥೆ ಕವನಗಳನ್ನು ಕೇಳುವ,ಪ್ರೋತ್ಸಾಹಿಸುವವರು ಈಗ ಕಡಿಮೆಯೆಂದೇ ಹೇಳಬಹುದು.ಕೇಳುಗರಲ್ಲದವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ.ಯಾಕೆಂದರೇ ಆನಂತರ ನಮ್ಮನ್ನು ನೋಡುವ ಅವರ ದೃಷ್ಟಿಯೇ ಬದಲಾಗಬಹುದು.ಕೇಳುಗರಿಲ್ಲದ ಕವನ ಮಂಕಾಗುತ್ತದೆ.ಆಗಷ್ಟೇ ಅರಳುತ್ತಿರುವ ಕವಿ ತೆರೆಮರೆಗೆ ಸರಿಯುತ್ತಾನೆ. ಓದುವ ಹವ್ಯಾಸವಿದ್ದು,ಬರೆದದ್ದನೆಲ್ಲಾ ಕೇಳುವ ಕೇಳುಗರಿದ್ದರೆ ಕವಿಗಳಾಗುವುದರಲ್ಲಿ ಸಂದೇಹವಿಲ್ಲ.

ಕಾಮೆಂಟ್‌ಗಳಿಲ್ಲ: