ಶುಕ್ರವಾರ, ಜನವರಿ 28, 2011

ನವಚೈತನ್ಯ ಗಾನ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ,
ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ,
ಶ್ರಮಜೀವಿಗೂ ಕೂಡ ಬಂತು ಆಕಳಿಕೆ,
ಜಗವೆಲ್ಲ ಆಗಿಹುದು ಅಗೋಚರದ ವಶಕೆ.

ಈಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ
ಮೋಡ ಚದುರಿತು ಬಿಟ್ಟು ಬಿಗುಮಾನ.
ಧರೆಗಿಳಿಯಿತು ಹೊಸ ಹುರುಪಿನ ರವಿಕಿರಣ
ಮೈಮನದರಲಿ ಎಂಥದೋ ಸಂಚಲನ.

ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ.
ಇನ್ನೂ ನಿಂತೇ ಇಹಿರೇನು?
ಕೇಳಲಿಲ್ಲವೇ ನಿಮಗೆ ನವಚೈತನ್ಯದ ಗಾನ.

ಕವಿ

ಏಳುಬೀಳಿನ ಬದುಕ ಕಥೆಯಾಗಿ ಚಿತ್ರಿಸುವವನು.
ಕಥೆಯನ್ನೆ ಬದುಕಾಗಿಸಿಕೊಂಡವನು.
ವಾಸ್ತವವ ಕಲ್ಪಿಸಿಕೊಳ್ಳುವವನು.

ಕಲ್ಪನೆಯ ವಾಸ್ತವಿಕರಿಸುವನು.
ತನ್ನ ಭಾವಗಳ ಜಗಕ್ಕೆ ಹಂಚುವನು.
ಜಗದ ಭಾವನೆಯ ತನ್ನದೆಂದುಕೊಂಡವನು.

ಏಕಾಂತ ಮೌನದಲಿ ನಿತ್ಯ ವಿಹರಿಸುವನು.
ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.
ಅಲೆವ ಭಾವನೆಗೆ ರೂಪ ಕೊಟ್ಟವನು.

ನಿದ್ರೆಯಲ್ಲಿ ಮೈಮರೆತು ಮಲಗಿದ್ದರೇನಂತೆ,
ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.

ಭಾನುವಾರ, ಜನವರಿ 23, 2011

image

ಒಂದು ಮಧ್ಯರಾತ್ರಿ

ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು ಮಂದವಾಗಿ ಬೆಳಗುತ್ತಿದ್ದೆ.ಗಡಿಯಾರದ ಟಿಕ್ ಟಿಕ್ ಶಬ್ಧ,ನಾನಿನ್ನೂ ನಿದ್ರಿಸಿಲ್ಲ ಎಂದು ಸಾರುತ್ತಿದೆ.ಸರಿಯಾಗಿ ನಲ್ಲಿ ತಿರುಗಿಸಲ್ಲವೋ ಏನೋ,ಬಚ್ಚಲಿನ ನಲ್ಲಿಯಿಂದ ನೀರು ತೊಟ್ಟುಕುತ್ತಿರುವ ಕೇಳಿ ಬರುತ್ತಿದೆ.ನಾನು ಇನ್ನೂ ಕಾರ್ಯನಿರ್ವಹಿಸುತ್ತಿದ್ದೆನೆ ಎಂದು ಸೊಳ್ಳೆಬತ್ತಿಯು ತನ್ನ ದೂಮ ಮತ್ತು ಕೆಂಪಗಿನ ಕಿಡಿಯನ್ನು ಸಾಕ್ಷಿಯನ್ನು ದೃಷ್ಟಿಗಮ್ಯವಾಗಿಸಿದೆ.ದೂರದಲ್ಲೆಲೋ ಬೀದಿ ನಾಯಿಗಳ ಬೊಗಳುವಿಕೆ ಅಸ್ಪಷ್ಟವಾಗಿ ಕೇಳಿಸುತ್ತಿದೆ.ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ.ಬೀದಿದೀಪದ ಬೆಳಕು ವಾಹನದ ಗಾಜಿಗೇ ಬಿದ್ದು ಪ್ರತಿಫಲಿಸಿ,ಮನೆಯ ಗೋಡೆಗಳ ಮೇಲೆ ಬೆಳಕು ಬೀಳುತ್ತಿದೆ.ಕಿಟಕಿಯಿಂದ ತಣ್ಣನೆಯ ಗಾಳಿ ಬೀಸಿ ಒಂದು ಕ್ಷಣ ಮೈ ಥರಗುಟ್ಟಿತು.ಹೊದಿಕೆಯನ್ನು ಎಳೆದು ಮುದುಡಿಕೊಂಡು ಕಣ್ಣುಮುಚ್ಚಿದೆ.ನಿದ್ರೆ ಯಾವಾಗ ಆವರಿಸಿತ್ತೋ ತಿಳಿಯಲಿಲ್ಲ.ಬೆಳಿಗ್ಗೆ ಕಣ್ಣು ಬಿಟ್ಟಾಗ ರಾತ್ರಿ ಕಂಡ ದೃಶ್ಯಾವಳಿಗಳು ಕತ್ತಲೆಯೊಂದಿಗೆ ಕರಗಿಹೋದವು

ಓದಿ ನೋಡಿ

'ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರು ಸಂತಸದಿಂದಿರಬಲ್ಲ.' 'ಓದು ಮನುಷ್ಯನಾಗಿ ಮಾಡಿದರೆ,ಬರವಣಿಗೆ ಅವನನ್ನು ಪರಿಪೂರ್ಣನಾಗಿ ಮಾಡುತ್ತದೆ.' ಮೇಲಿನ ಮಹನೀಯರ ನುಡಿರತ್ನಗಳನ್ನು ಕೇಳಿ ನಿಮಗೂ ಪುಸ್ತಕವನ್ನು ಓದಬೇಕು ಎನಿಸಿರಬೇಕು.ಅಥವಾ ನೀವು ಸಹ ಪುಸ್ತಕಪ್ರೇಮಿ ಯಾಗಿರಬಹುದು.ನೀವು ಓದಿದ್ದ ಯಾವುದೋ ಪುಸ್ತಕ ತುಂಬ ಇಷ್ಟವಾಗಿರಬಹುದು.ಆ ಪುಸ್ತಕದ ಬಗ್ಗೆ ನಿಮ್ಮ ಗೆಳೆಯರಿಗೆ ಹೇಳಿ,ಓದಲು ಕೊಟ್ಟಿರಬಹುದು.ಅಥವಾ ಹೇಳಿರಬಹುದು.ಇಲ್ಲಿ ನಾನು ಓದಿ ಇಷ್ಟಪಟ್ಟು ಗೆಳೆಯರಿಗೆ ಓದಲು ಹೇಳಿದ ಪುಸ್ತಕಗಳ ಹೆಸರುಗಳನ್ನು ಕೊಟ್ಟಿದ್ದೇನೆ.ಇವುಗಳಲ್ಲಿ ನೀವು ಓದಿರುವ ಪುಸ್ತಕಗಳು ಇರಬಹುದು.ನೀವು ಓದಿದ್ದ,ಇಷ್ಟಪಟ್ಟ ಪುಸ್ತಕಗಳ ಬಗ್ಗೆ ಹಂಚಿಕೊಳ್ಳಬಹುದು. ಕುವೆಂಪು: ಕಾನೂರು ಹೆಗ್ಗಡತಿ. ಮಲೆಗಳಲ್ಲಿ ಮದುಮಗಳು. ನೆನಪಿನ ದೋಣಿಯಲ್ಲಿ. ಸ್ವಾಮಿ ವಿವೇಕಾನಂದ. ಮಲೆನಾಡಿನ ಚಿತ್ರಗಳು. ಕಥನ ಕವನಗಳು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ: ಕರ್ವಾಲೋ, ಚಿದಂಬರ ರಹಸ್ಯ. ಜುಗಾರಿ ಕ್ರಾಸ್. ಕಿರಗೂರಿನ ಗಯ್ಯಾಳಿಗಳು. ಅಬಚೂರಿನ ಪೋಸ್ಟಾಪೀಸು. ಮಾಯಾಲೋಕ. ಮಿಸ್ಸಿಂಗ್ ಲಿಂಕ್. ಪಾಕಕ್ರಾಂತಿ ಮತ್ತು ಇತರ ಕಥೆಗಳು. ವಿಮರ್ಶೆಯ ವಿಮರ್ಶೆ. ಪ್ಲೇಯಿಂಗ್ ಸಾಸರ್. ಪರಿಸರದ ಕಥೆ. ತಾ.ರಾ.ಸು: ದುರ್ಗಾಸ್ತಮಾನ. ರಕ್ತರಾತ್ರಿ. ತಿರುಗುಬಾಣ. ಕಸ್ತೂರಿಕಂಕಣ. ಚಂದವಳ್ಳಿಯ ತೋಟ. ಹಿಂತಿರುಗಿ ನೋಡಿದಾಗ. ಗಿರಿಮಲ್ಲಿಗೆ. ಮರಳುಸೇತುವೆ. ನಾಗರಹಾವು. ಕಂಬನಿಯ ಕುಯಿಲು. ಹೊಸಹಗಲು. ವಿಜಯೋತ್ಸವ. ತ.ರಾ.ಸುರವರ ಸಮಗ್ರ ಕಥೆಗಳು. ಯು.ಆರ್.ಅನಂತಮೂರ್ತಿ: ಸಂಸ್ಕಾರ. ಶಿವರಾಮ ಕಾರಂತ: ಮೂಕಜ್ಜಿಯ ಕನಸು

ಶನಿವಾರ, ಜನವರಿ 22, 2011

ಚಿತ್ರ-ಕವನ

ಒಂದು ಒಣಗಿದ್ದ ಮರ.ಅದರ ಪಕ್ಕದಲ್ಲಿ ಎತ್ತುಗಳಿಲ್ಲದ ಗಾಡಿ.ಹಿಂಬದಿಯಲ್ಲಿ ಕೆರೆ.ಅದರ ಆ ತೀರದಲ್ಲಿ ದಟ್ಟ ಕಾನನ.ಮೇಲೆ ಶುಭ್ರ ನೀಲಾಕಾಶ.ಒಣಮರದ ಸುತ್ತಲ್ಲೂ ಒಣಗಿದ್ದ ಗಿಡಗಂಟಿಗಳು:ಈ ಚಿತ್ರವನ್ನು ನೋಡಿ ರಚಿಸಿದ ಕವನ ಈ ಕೆಳಗಿನದು: ಒಣಮರಕ್ಕೆ ಆಗಿದೆ ನೀರಡಿಕೆ. ಹಿನ್ನಲೆಯಲ್ಲಿ ಇದೆ ನೀರ ಒರತೆ. ತುರ್ತಾಗಿ ಸಿಗಬೇಕಾಗಿದೆ ಮರಕ್ಕೆ ಚಲನೆ; ಅಥವಾ ಇರಲೇಬೇಕು ಅಪಾರ ಸಹನೆ. ನೀರು ಏರಿ ಬಾನ ಸೇರಿ ಮತ್ತೆ ಜಾರಿ ಭುವಿಯ ಸೇರೋವರೆಗಿನ ತಾಳ್ಮೆ. ಎತ್ತಿಲ್ಲದ ಗಾಡಿಯು ತಂದಿದೇ ಚಲನೆಯ ಚಪಲ. ಆಚೆ ತೀರದ ಹಸಿರು ಕೆಡಿಸಿದೇ ತಾಳ್ಮೆ. ಗಾಡಿ ಚಲನೆ ಕಳೆದು ಮೂಲೆ ಸೇರಿದೆ. ನಿಂತ ಮರವೂ ಚಲನೆಗಾಗಿ ಕೊರಗೆ ಕೊರಗಿದೆ. ಎತ್ತಿನಗಾಡಿಗೆ ಬರಲಿ ಜೋಡಿಎತ್ತು, ಕೊರಳಗಂಟೆಯ ಸದ್ದು ತರಲಿ ಮರುಜೀವ. ಬೇಗ ಬಾರಯ್ಯ ವರುಣ, ಇರಲಿ ಜೀವದ ಮೇಲೆ ಕರುಣ

ತೋಚಿದ್ದು-ಗೀಚಿದ್ದು

ಬರಸಿಡಿಲೇ ಬಡಿಯಲಿ ಬಿರುಮಳೆಯೇ ಸುರಿಯಲಿ. ಅಗ್ನಿದೇವ ರುದ್ರನಾಗಿ ಅಗ್ನಿವೃಷ್ಟಿ ಸುರಿಸಲಿ. ಸಪ್ತಸಾಗರವೇ ಕದಡಿ ಕೆರಳಿ, ಲೋಕವೆಲ್ಲ ಮುಳುಗಲಿ, ಜಗವೇ ಕೆರಳಿ ಏನೇ ಬರಲಿ ದಿಟ್ಟಗುರಿಯು ನಿನ್ನದಾಗಲಿ

ಪೂರ್ಣಚಂದ್ರ ಮತ್ತು ಗಂಧರ್ವನಗರಿ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬಳಿಯಿಂದ ಕೇಳಿ ಬರುತ್ತಿರುವ ಗಜಿಬಿಜಿ ಮಾತುಗಳು.ಅಬ್ಪಾ ಇದೇನು ಗಂದರ್ವಲೋಕವೇ ಧರೆಗಿಳಿದಂತಿದೆಯಲ್ಲ.ಅಗೋ! ಅಲ್ಲಿ ದೂರದ ಮಂಟಪ ಮಿಣುಕುದೀಪಗಳಿಂದ ಜಗಮಗಿಸುತ್ತಿದೆ.ಹಸಿರು,ಕೆಂಪು,ನೀಲಿ,ಹಳದಿ ಇನ್ನೂ ಹಲವಾರು ತರತರದ ಬಣ್ಣಗಳು.ಹೌದು! ಇದು ಬಣ್ಣಗಳದೇ ಲೋಕ.ಅಯ್ಯೋ ಇದೇನಾಯ್ತು?. ಇಡೀ ನಗರವೇ ಕರಗಿಹೋದಂತೆ ತೋರುತ್ತಿದೆಯಲ್ಲ.ಹೌದು ಇಲ್ಲಿ ಎಲ್ಲವೂ ಕೃತಕ.ಕ್ಷಣಿಕವೂ ಕೂಡ.ಒಂದು ಕ್ಷಣ ವಿದ್ಯುತ್ ಕೈಕೊಟ್ಟರೂ ಇಲ್ಲಿಯ ಬದುಕೇ ತಟಸ್ಥವಾದಂತೇ.ಒಂದು ನಿಮಿಷದ ಹಿಂದೆ ಕಂಡ ಸೊಬಗು ಹೀಗೆಲ್ಲಿ ಕರಗಿಹೋಯಿತು.ಅಥವಾ ಇದು ಬರೀ ಕನಸೇ? ಇರಲಾರದು.ಹೋ ಅದೋ ಆಗಸದಿ ಆ ಚಂದ್ರ ಅದೆಷ್ಟು ತೇಜೋಮಯನಾಗಿದ್ದಾನೆ.ಅರೇ ಚುಕ್ಕಿಗಳು!ಇಷ್ಟುಹೊತ್ತು ಇವೆಲ್ಲಿದವು?.ಅಥವಾ ಇದೂ ಸಹ ಕನಸೇ ಇರಲಿಕ್ಕಿಲ್ಲ.ಆದರೆ ಆ ಚಂದ್ರ ಈ ಕೃತಕ ಗಂದರ್ವನಗರಿಗಿಂತ ಸುಂದರ,ಸಹಜ.ಇಷ್ಟು ದಿನ ನಾನೇಕೆ ಈ ಸೊಬಗನ್ನು ಕಾಣಲಿಲ್ಲ?.ಆಸ್ವಾದಿಸಲಿಲ್ಲ?.ಅದೋ! ಶಶಿಯ ಬೆಳದಿಂಗಳಲ್ಲಿ ನಗರ ಅದೆಷ್ಟು ಮನೋಹರವಾಗಿ ಗೋಚರಿಸುತ್ತಿದೆ.ಅಯ್ಯೋ ಇದೆನಾಯ್ತು ವಿದ್ಯುತ್ ಬಂದೇ ಬಿಟ್ಟಿತ್ತಲ್ಲ.ಅದಕ್ಕೇನು ಅವಸರವಿತ್ತು?

ಓ ದೇವ ನೀ ಬೇಗ ಬಾ

ಮಣ್ಣಾಟವಾಡುವ ಕಂದನ ಕಂಡು
ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,
ತಿದ್ದಿ ನೆಡೆಸಲು
ಓ ದೇವ ನೀ ಬೇಗ ಬಾ

ಪ್ರಾಣ ಹಿಂಡುವ ಮಂದಿ
ರಕ್ತ ಹೀರುವ ಮಂದಿ
ಎಲ್ಲ ಮಂದಿಯ ಮನದಿ
ಮಾನವೀಯತೆಯ ಕಿಡಿಯ ನೀ ಹಚ್ಚು ಬಾ
ಓ ದೇವ ನೀ ಬೇಗ ಬಾ

ಅಂದು ಭಕ್ತಿ ಮಾರ್ಗದಿ ನಿನ್ನ
ನಾಮ ಸ್ಮರಣೆಯ ಮಾಡಿ
ಮುಕ್ತಿ ತೋರೋ ಎಂದು ಭಜಿಸುತಲಿರೇ
ಇಂದು ಜಾತಿ,ಪಕ್ಷವು ನಿನ್ನ
ನಾಮವನೇಳಿ ಸರ್ವನನ್ನು ಅಲ್ಪನಾಗಿಸುತಿಹರು.

ಹೆಸರೊಂದೆ ಸಾಕೀಗ,ಭಕ್ತಿಗಿಲ್ಲವೋ ಜಾಗ
ಎಂಬ ಹುಂಬರೆದೆಯಲ್ಲಿ
ಭಕ್ತಿಜ್ಯೋತಿಯ ಹಚ್ಚಲು
ಓ ದೇವ ನೀ ಬೇಗ ಬಾ

ನಿನ್ನಯ ಕಂದರು ನಾವೆಲ್ಲ
ಕುರುಡರಂದದ್ದಿ ನಿನ್ನ ಹುಡುಕುತಿರುವೆವಲ್ಲ.
ನೀ ಬರಲು ಪ್ರಶ್ನೆಗಳೇ ಇಲ್ಲ.
ಆಸ್ತಿಕರ ನಾಸ್ತಿಕರ ಜಗಳವದು ನಿಂತಿಲ್ಲ.
ಆದಷ್ಟು ಬೇಗ ನೀ ಬರಬೇಕಲ್ಲ.
ಓ ದೇವ ನೀ ಬೇಗ ಬಾ.

ಬಾವಿಯೊಳಗಿನ ಕಪ್ಪೆಯ ರೀತಿ
ನಮ್ಮ ವ್ಯಾಪ್ತಿಯಲ್ಲಿ ನಿನ್ನ ಹುಡುಕುತಿರುವೆವು.
ಹಲವು ಗೊಂದಲದ ನಡುವೆ
ಬಾಳುತಿರುವ ಮಂದಿಯ ಮುಂದೊಮ್ಮೆ ನೀ ನಿಲ್ಲು ಬಾ.

ಭಕ್ತಿಯು ಹಣವಾಗಿ,ಪ್ರೀತಿಯು ಹಣವಾಗಿ
ಅಕ್ಷರವ ಹಣವಾಗಿ ಕಾಣುವ ಜನರ
ಸರಿದಾರಿಯಲ್ಲಿ ನಡೆಸು ಬಾ
ಓ ದೇವ ನೀ ಬೇಗ ಬಾ

ಗತಿಗೆಟ್ಟವರು ಇಲ್ಲಿ ಹಲವಾರು ಮಂದಿ
ಉಳ್ಳವರ ದರ್ಪಕ್ಕೆ ಅವರೆಲ್ಲ ಬಂದಿ
ಎಲ್ಲರುದಾರಕ್ಕೆ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ವಿಜ್ಞಾನದ ಆವೇಗದಲ್ಲಿ ಯಂತ್ರಗಳ ಸಂತೆ
ಬದುಕಾಗಿದೆ ಇಲ್ಲಿ ನಿರ್ಜೀವ ಯಂತ್ರದಂತೆ
ಎಲ್ಲವೂ ಜಡವಾಗಿ ತೋರುತಿರೇ
ಜೀವಸ್ಪರ್ಶವ ನೀಡೇ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ಹೇಮಾವತಿ

ಹೊಂಬಿಸಿಲ ಹೊಳಪಲಿ ಜುಳುನಾದದ ಜೊಂಪಲಿ ತುಂಬಿ ಹರಿವಳು ನುಣ್ಣಗೆ ಮಲೆಯ ಮೇಲ್ಗಡೆ ಬೀಸುಗಾಳಿಯು ತಣ್ಣಗೆ ದಡದ ಸಂಪಿಗೆ,ಗಂಧ ಕಂಪಿಗೆ,ದುಂಬಿಗಾನದ ಇಂಪಿದೆ ಮಲೆಯ ಮಕ್ಕಳ ನೀರ ಆಟ ಬಟ್ಟೆ ಒಗೆಯುವ ಹೆಂಗಳೆಯರ ಕೂಟದ ನಗುವು ಎಲ್ಲೆಡೆ ಪ್ರತಿಫರಿಸಿದೆ. ಗಾಳವಿಕ್ಕಿ ಕಾದು ಕುಳಿತ ದನಗಾಯಿಯ ಮೊಗದಲಿ ತತ್ವಜ್ಞಾನಿಯ ಹೊಳಪಿದೆ.

ಅ'ಗಣಿತ'

ಎಣಿಸುವುದು ಗಣಿತ ಎಣಿಸಲಾಗದು ಅಗಣಿತ

ಶುಕ್ರವಾರ, ಜನವರಿ 21, 2011

ಕವನ:ಕವಿಗಾಗಿ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ, ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ. ಮೂಗ ಸೆಳೆವ ಹೂ ಸುಗಂಧ ಕವಿಗಾಗಿ.ಜಗವ ಮರೆಸೋ ಜೇನ ಸವಿಯು ಕವಿಗಾಗಿ. ತಂಪ ನೀವ ತಂಗಾಳಿಯ ಸ್ಪರ್ಶ ಕವಿಗಾಗಿ. ಮನ ತಣಿಸುವ ಸೋನೇಮಳೆಯು ಕವಿಗಾಗಿ. ಕವಿಯಿಂದಲೇ ಜಗದಿ ಮಳೆಯು ಕವಿಯಿಂದಲೇ ಜಗದಿ ಬೆಳೆಯು ಕವಿಯಿದ್ದರೆ ಜಗಕ್ಕೆ ಬೆಳೆಯು, ಕವಿಯಿದ್ದರೆ ಜಗಕ್ಕೆ ಬೆಲೆಯು. -ನಂದೀಶ್ ಬಂಕೇನಹಳ್ಳಿ

ಕವನ:ಬಾ ಮಲೆನಾಡಿಗೆ




ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,

ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-

ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ

ಗುರುವಾರ, ಜನವರಿ 20, 2011

ನವಚೈತನ್ಯದ ಗಾನ

ಮೋಡ ಮುಸುಕಿರೇ ಮಂಕು ಕವಿದಿದೇ ಮನಕೆ ಹುರುಪಿಲ್ಲ ಕಾರ್ಯದಲಿ ಗರಬಡಿದಿಹ ಜಗಕೆ ಇಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ ಧರೆಗಿಳಿಯಿತು ಹೊಸ ಹೊಳಪಿನ ರವಿಕಿರಣ ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ ಬಿಡುವಿಲದ ಜಗವೀಗ ಕೆಲಸ ಕಾರ್ಯದಲಿ ಮಗ್ನ