ಶುಕ್ರವಾರ, ಜನವರಿ 28, 2011

ನವಚೈತನ್ಯ ಗಾನ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ,
ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ,
ಶ್ರಮಜೀವಿಗೂ ಕೂಡ ಬಂತು ಆಕಳಿಕೆ,
ಜಗವೆಲ್ಲ ಆಗಿಹುದು ಅಗೋಚರದ ವಶಕೆ.

ಈಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ
ಮೋಡ ಚದುರಿತು ಬಿಟ್ಟು ಬಿಗುಮಾನ.
ಧರೆಗಿಳಿಯಿತು ಹೊಸ ಹುರುಪಿನ ರವಿಕಿರಣ
ಮೈಮನದರಲಿ ಎಂಥದೋ ಸಂಚಲನ.

ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ.
ಇನ್ನೂ ನಿಂತೇ ಇಹಿರೇನು?
ಕೇಳಲಿಲ್ಲವೇ ನಿಮಗೆ ನವಚೈತನ್ಯದ ಗಾನ.

ಕವಿ

ಏಳುಬೀಳಿನ ಬದುಕ ಕಥೆಯಾಗಿ ಚಿತ್ರಿಸುವವನು.
ಕಥೆಯನ್ನೆ ಬದುಕಾಗಿಸಿಕೊಂಡವನು.
ವಾಸ್ತವವ ಕಲ್ಪಿಸಿಕೊಳ್ಳುವವನು.

ಕಲ್ಪನೆಯ ವಾಸ್ತವಿಕರಿಸುವನು.
ತನ್ನ ಭಾವಗಳ ಜಗಕ್ಕೆ ಹಂಚುವನು.
ಜಗದ ಭಾವನೆಯ ತನ್ನದೆಂದುಕೊಂಡವನು.

ಏಕಾಂತ ಮೌನದಲಿ ನಿತ್ಯ ವಿಹರಿಸುವನು.
ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.
ಅಲೆವ ಭಾವನೆಗೆ ರೂಪ ಕೊಟ್ಟವನು.

ನಿದ್ರೆಯಲ್ಲಿ ಮೈಮರೆತು ಮಲಗಿದ್ದರೇನಂತೆ,
ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.