ಗುರುವಾರ, ಮೇ 25, 2023

ತೋರಣಮಾವು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ತೋರಣಮಾವು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಮೋಟಮ್ಮ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಭೀಮ್ ಆರ್ಮಿ ಅಧ್ಯಕ್ಷರಾದ ಗಿರೀಶ್ ಅವರು ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ತೋರಣಮಾವು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಯಿತು. 
ಈ ಸಂದರ್ಭದಲ್ಲಿ ತೋರಣಮಾವು ಸಕಿಪ್ರಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಲೋಕೇಶ್, ಕೂದುವಳ್ಳಿ ಗ್ರಾ.ಪಂ ಸದಸ್ಯರಾದ ಜ್ಯೋತಿ, ಆಶಾ ಕಾರ್ಯಕರ್ತೆ ನೇತ್ರಾವತಿ, ಹಿರಿಯ ಮುಖಂಡರಾದ ಈರಯ್ಯ, ಲಿಂಗರಾಜು, ಮುಳ್ಳಯ್ಯ, ಉಮೇಶ್, ಶಶಿಕುಮಾರ್, ಲೋಕೇಶ್ ಮುಂತಾದವರು ಇದ್ದರು.

ಮಂಗಳವಾರ, ಮೇ 9, 2023

ಎಸ್‌ಎಸ್‌ಎಲ್‌ಸಿ ಪರೀಕ್ಷೆ:ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಈಶ್ವರಿ ಸಿರಿಗಂಧ


ಕೊಟ್ಟಿಗೆಹಾರ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಈಶ್ವರಿ ಸಿರಿಗಂಧ ೬೧೬ (ಶೇ೯೯) ಅಂಕ ಪಡೆಯುವ ಮೂಲಕ ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲ್ಗುಣಿ ಗ್ರಾಮದ ಜಯಪ್ರಕಾಶ್ ಮತ್ತು ಸುಪ್ರಿತಾ ದಂಪತಿಗಳ ಪುತ್ರಿ ಈಶ್ವರಿ ಸಿರಿಗಂಧ, ಕನ್ನಡ ೧೨೪, ಇಂಗ್ಲಿಷ್ ೯೯, ಹಿಂದಿ ೯೮, ಗಣಿತ ೯೯, ವಿಜ್ಞಾನ ೯೭, ಸಮಾಜ ವಿಜ್ಞಾನ ವಿಷಯದಲ್ಲಿ ೯೯ ಅಂಕ ಪಡೆದು ಒಟ್ಟು ೬೧೬ ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಟಾಪರ್ ಎನಿಸಿಕೊಂಡಿದ್ದಾರೆ.
ವಿಧ್ಯಾರ್ಥಿನಿ ಈಶ್ವರಿ ಸಿರಿಗಂಧ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದು ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ವಿಧ್ಯಾರ್ಥಿನಿ ಈಶ್ವರಿ ಸಿರಿಗಂಧ, ಅಂದು ಮಾಡಿದ ಪಾಠವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿರುವಾಗ ಪುನರಾರ್ವತನೆ ಓದಿಕೊಳ್ಳುತ್ತಿದ್ದೆ. ಕಷ್ಟ ಪಟ್ಟು ಓದುವುದಕ್ಕಿಂದ ಇಷ್ಟ ಪಟ್ಟು ಓದುತ್ತಿದ್ದೆ. ಮನೆಯಲ್ಲಿ ಕೂಡ ಓದಿನ ಬಗ್ಗೆ ಯಾವುದೇ ಒತ್ತಡಗಳಿರಲಿಲ್ಲ. ಪೋಷಕರು, ಶಿಕ್ಷಕರ ಸಹಕಾರದೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಐಎಎಸ್ ಮಾಡುವ ಗುರಿ ಇದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕವನ್ನು ಪಡೆಯಲು ಕಾರಣರಾದ ಪೋಷಕರು ಮತ್ತು ಶಿಕ್ಷಕರಿಗೆ ಧನ್ಯವಾದ ತಿಳಿಸಿಸುತ್ತೇನೆ ಎಂದು ತಿಳಿಸಿದ್ದಾರೆ.

ಶನಿವಾರ, ಮೇ 6, 2023

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ ರ‍್ಯಾಲಿ, ಬಹಿರಂಗ ಸಭೆ

ಶ್ರಮಿಕ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ, ಸಿಪಿಐ ಅಭ್ಯರ್ಥಿ ಗೆಲ್ಲಿಸಿ

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ  ರ‍್ಯಾಲಿ, ಬಹಿರಂಗ ಸಭೆ

ಕೊಟ್ಟಿಗೆಹಾರ:ಶ್ರಮಿಕ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದು ಕೇರಳ ರಾಜ್ಯ ಸಭಾ ಸದಸ್ಯರಾದ ಸಂತೋಷ್‌ಕುಮಾರ್ ಹೇಳಿದರು.
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಪರ ಮತಯಾಚನೆ, ಬಹಿರಂಗ ಸಭೆ ಮತ್ತು ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿಗೂ ಕೂಡ ಬಹುತೇಕ ಕಾರ್ಮಿಕ ವರ್ಗ ಸ್ವಂತ ಸೂರಿಲ್ಲದೇ ಬದುಕು ನಡೆಸುತ್ತಿದ್ದೆ. ಬಡವರ್ಗದ ಮೂಲಭೂತ ಸವಲತ್ತುಗಳಲ್ಲಿ ಒಂದಾದ ಸ್ವಂತ ಸೂರನ್ನು ಕಲ್ಪಿಸಲು ಬಿಜೆಪಿ ಸರ್ಕಾರ ಸೋತಿದ್ದು ಬಿಜೆಪಿ ಸರ್ಕಾರ ಉಳ್ಳವರ, ಶ್ರೀಮಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಜನತಾ ಪಾರ್ಟಿಯೂ ಬಿಸಿನೆಸ್ ಜನತಾ ಪಾರ್ಟಿಯಾಗಿದೆ. ಬಡವರ್ಗದ ಅಭಿವೃದ್ದಿಗೆ ಸಿಪಿಐ ಪಕ್ಷ ಹಲವಾರು ಹೋರಾಟಗಳನ್ನು ಹಿಂದಿನಿಂದಲೂ ಸಂಘಟಿಸುತ್ತಾ ಬಂದಿದೆ. ಬಡವರ್ಗದ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಕಂಕಣಬದ್ದವಾಗಿದೆ ಎಂದರು.
ಸಿಪಿಐ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಸಿದ್ದನಗೌಡ ಪಾಟೀಲ್ ಮಾತನಾಡಿ ದುಡಿಯುವ ಜನರ ಪರವಾಗಿ ಧ್ವನಿ ಎತ್ತದೇ ಇರುವುದರಿಂದ ಬಡವರ ವಿರೋಧಿ ಕಾನೂನುಗಳು ಬರುವಂತಾಗಿದೆ. ಬಡಜನರು ಸೂರು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡಿಸಲು ಮುಕ್ತ ಭರವಸೆ ನೀಡಿದ್ದ ಬಿಜೆಪಿ ಭರವಸೆಗೆ ಸೀಮಿತವಾಗಿದೆ ಎಂದರು.
ಸಿಪಿಐ ಪಕ್ಷದ ಬ್ಯಾಂಕ್ ಖಾತೆಯಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಹಣ ಇಲ್ಲ. ಸಿಪಿಐ ಬಡವರ ಸ್ವಾಭಿಮಾನದ ಪಕ್ಷವಾಗಿದೆ. ಮೂಡಿಗೆರೆ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರು ಬಡತನದ ಹಿನ್ನಲೆಯಿಂದ ಬಂದವರು. ಬಡವರ ಪರವಾದ ಧ್ವನಿಯಾಗಿರುವ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು, ಸಿಪಿಐ ಮುಖಂಡರಾದ ಲಕ್ಷö್ಮಣಕುಮಾರ್, ಜ್ಯೋತಿ, ಸಂತೋಷ್, ಗುಣಶೇಖರ್, ಶೇಖರ್, ಅಮ್ಜದ್ ಮುಂತಾದವರು ಇದ್ದರು.

ಸೋಮವಾರ, ಸೆಪ್ಟೆಂಬರ್ 5, 2022

ಬಣಕಲ್ ನ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕೊಟ್ಟಿಗೆಹಾರ:ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು ಎಂದು ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರು ಇಮ್ರಾನ್ ಹೇಳಿದರು.
ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ರಾಷ್ಟ್ರದ ಎರಡನೇ ರಾಷ್ಟ್ರಪತಿಯೂ ಆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ ಶಿಕ್ಷಕರ ಮಹತ್ವವನ್ನು ಎಲ್ಲೆಡೆ ಸಾರಲು ಪ್ರೇರಣೆಯಾಗಿದೆ. ಪ್ರಜ್ಞಾವಂತ ನಾಗರಿಕರನ್ನು ಸಮಾಜ ನೀಡುವ ಶಿಕ್ಷಕರ ಕೊಡುಗೆಯನ್ನು ಸ್ಮರಿಸುವ ಅಗತ್ಯವಿದೆ ಎಂದರು
 ಶಿಕ್ಷಕರ ದಿನಾಚರಣೆ ಅಂಗವಾಗಿ  ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳೇ ಶಿಕ್ಷಕರಿಗೆ ಮಕ್ಕಳಿಂದ ವಿವಿಧ ಕ್ರೀಡಾ ಸ್ಪರ್ಧೆ ಗಳನ್ನು ಆಯೋಜಿಸಿದ್ದರು. 
ವಿಜೇತರಾದ ಶಿಕ್ಷಕರಿಗೆ ಮಕ್ಕಳು ಉಡುಗೊರೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ, ಸಹಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

ಭಾನುವಾರ, ಸೆಪ್ಟೆಂಬರ್ 4, 2022

ಬಣಕಲ್ ನಜರೆತ್ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕೊಟ್ಟಿಗೆಹಾರ:ಬೆಂಗಳೂರಿನಲ್ಲಿ ನಡೆದ ಐಸಿಎಸ್‌ಇ ಶಾಲೆಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬಣಕಲ್ ನಜರೆತ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ  ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೭ ವರ್ಷ ವಯೋಮಿತಿಯ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಬಣಕಲ್ ನಜರೆತ್ ಶಾಲೆಯ ದಿವಿನ್ ವಿರೋಯ್ ಡಿಸೋಜ ಪ್ರಥಮ ಮತ್ತು
 ಗೌರಿ ಹೆಚ್ ಬಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ತಿಳಿಸಿದ್ದಾರೆ.

ಭಾನುವಾರ, ಜುಲೈ 22, 2012

ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಬುಧವಾರ, ಏಪ್ರಿಲ್ 18, 2012

nenapina chitragalu,nandish,nandish mudigere
nenapina chitragalu,nandish,nandish mudigere

ಕಥೆ;ಪ್ಯಾಟೆ6

ನಡೆದು ಬರುವುದು ಕಾಣಿಸಿತು.ಮಂಜ ಸಿದ್ದನನ್ನು ನೋಡಿದನೆಂದು ತೋರುತ್ತದೆ.ಅವನು ಬೇಗಬೇಗ ಹೆಜ್ಜೆಹಾಕುತ್ತಾ ಸಿದ್ದನ ಬಳಿಗೆ ಬಂದ.ಸಿದ್ದ ಮಂಜನನ್ನು ಬಿಗಿದಪ್ಪಿ ಕೆನ್ನೆಗೊಂದು ಸಿಹಿಮುತ್ತನಿತ್ತ.ಅರ್ಚಕರಿಗೆ ಕೈಮುಗಿದು ನಮಸ್ಕರಿಸಿದ ಸಿದ್ದ ನಡೆದ ಸಂಗತಿ ಕೇಳಿ ತಿಳಿದುಕೊಂಡ.ಅರ್ಚಕರಿಗೆ ಕೃತಘ್ಞತೆಯನ್ನು ಸಲ್ಲಿಸಿದ ಸಿದ್ದ ಮಂಜನೊಡನೆ ಬಸ್ಸನೇರಿ ಕುಳಿತ.ನಂಜೇಗೌಡರನ್ನು ಈ ಪೇಟೆಯಲ್ಲಿ ಹುಡುಕಿ ಮಂಜ ಮರಳಿಬಂದ ವಿಚಾರ ತಿಳಿಸುವುದು ಕಷ್ಟವಾಗಿತ್ತು.ಹೇಗಿದ್ದರೂ ಬೆಟ್ಟದೂರಿಗೆ ಬರುತ್ತಾರೆ.ಬಂದಾಗ ಹೇಳಿದರೆ ಆಯ್ತೆಂದು ಸಿದ್ದ ನಿರ್ದರಿಸಿದ್ದ.ಚಂದ್ರಿ ತೋಟದ ಕೆಲಸ ಮುಗಿಸಿ ಮನೆ ಮುಟ್ಟುವುದರೊಳಗೆ,ನಾವು ಮನೆ ಮುಟ್ಟಬೇಕೆಂದು ಮನದಲ್ಲೇ ಅಂದುಕೊಂಡ.ಆ ವೇಳೆಗೆ ಪೇಟೆಯನ್ನು ಬಿಟ್ಟ ಬಸ್ಸು ಬೆಟ್ಟದೂರಿನ ಕಡೆಗೆ ಹೊರಟಿತು.

ಕಥೆ;ಪ್ಯಾಟೆ5

'ಚಂದ್ರಿ ನೀನು ಬಾಕಿ ಆಳಿನ ಜೊತಿಗೆ ತೋಟುಕ್ಕೆ ಹೋಗಿರು,ಸಿದ್ದುಂಗೇ ಮನೆತವ ಸ್ವಲ್ಪ ಕೆಲಸ ಅದೆ' ಎಂದರು.ನಡೆದದೇನು ತಿಳಾಯದ ಚಂದ್ರಿ ಮಂಜನನ್ನು ಬಂಗಲೆಗೆ ಹಾಲು ತರಲು ಕಳಿಸಿರಬೇಕೆಂದು ಅಂದುಕೊಂಡು ಹೆಣ್ಣಾಳಿನ ಜೊತೆ ತೋಟಕ್ಕೇ ಹೋದಳು.ಇತ್ತ ಸಿದ್ದ 'ಗೌಡ್ರೇ ಮಂಜ ಎಲ್ಲಿ?.ಹಾಲ್ ತರಕೆ ಕಳ್ಸೀರಾ?'ಎಂದು ಕೇಳಿದ.ಅದಕ್ಕೆ ನಂಜೇಗೌಡರು ತಡವರಿಸಿದರು.ಅಳುಕಿನಿಂದಲೇ 'ಲೋ ಸಿದ್ದ ಏನಂಥ ಹೇಳ್ಲೋ,ನಿನ್ನೇ ಪ್ಯಾಟಿಗೆ ಹೋದ ಮೇಲೆ ಅಲ್ಲಿ ಕ್ಯಾಂಟಿನ್ ತವ ಕೂರ್ಸಿ,ಎಲ್ಲೂ ಹೋಗಬೇಡ ಅಂತ ಹೇಳಿ ಡಿಸೇಲ್ ತರಕ್ಕೆ ಅಂಥ ಹೋದನಾ.ಬಂದು ನೊಡ್ತೀನಿ,ಮಂಜ ಇಲ್ಲ.ನನಗೆ ಗಾಬರಿಯಾಗಿ ಇಡೀ ಪ್ಯಾಟಿಯೆಲ್ಲ ಹುಡ್ಕಿದ್ರುವೇ ಕಾಣ್ಸಿಸ್ಲಿಲ್ಲ ಕಣಾ,ಏನ್ ಮಾಡಕ್ಕೂ ತೋಚದೇ ಅಂಗೇ ಬಂದುಬುಟ್ಟೆ.ಚಂದ್ರಿ ತವ ಹೇಳಕ್ಕೇ ದೈರ್ಯ ಸಾಲ್ಲಿಲ್ಲ.ಅದುಕ್ಕೆ ತೋಟಕ್ಕೆ ಕಳ್ಸಿ ನಿನಗೆ ಹೇಳಿದು' ಎಂದು ಒಂದು ದೀರ್ಘ ನಿಟ್ಟುಸಿರು ಬಿಟ್ಟರು.ಸಿದ್ದ 'ಏನ್ ಗೌಡ್ರೇ ಹಿಂಗ್ ಹೇಳಬುಟ್ರಿ,ಚಂದ್ರಿಗೇನಾರ ಗೊತ್ತಾಗುಬುಟ್ರೆ ಅಷ್ಟೇಯಾ?.ಮಂಜ ಪ್ಯಾಟೆ ಗೀಟೆಗೆಲ್ಲ ಹೋದೋನೆ ಅಲ್ಲ.ಗೌಡ್ರೇ, ನೀವೇ ಹೆಂಗಾರ ಮಾಡಿ ಮಗಿನಾ ಹುಡುಕ್ಸಿ ಕೊಟ್ಟುಬುಡಿ.ನಿಮ್ಮ ದಮ್ಮಯ್ಯ ಅಂತೀನಿ'ಎಂದು ಆತಂಕದಿಂದ ಗೌಡರಿಗೆ ಕೈ ಮುಗಿದ.ಅದಕ್ಕೆ ಗೌಡರು 'ನಡಿ ಪ್ಯಾಟೇಗ್ ಹೋಗನ.ಪೋಲಿಸ್ ಕಂಪ್ಲೇಟ್ ಕೊಟ್ಟು ಬರನ.ನಿನ್ ತವ ಮಂಜಂದು ಪೋಟ ಏನಾರ ಇದ್ರೆ ತಗಂಡು ಬಾ ಇಲ್ಲಿಗೆ.ನಾನು ಅಷ್ಟೋತಿಗೆ ಹೊರಟೀರ್ತೀನಿ'ಎಂದರು.ಸಿದ್ದ ಬೇಗನೇ ಹೋಗಿ ಪ್ರೇಮು ಕಟ್ಟಿಸಿ ಗೋಡೆಗೆ ನೇತು ಹಾಕಿದ ಹೊಗೆ ಹಿಡಿದು ಮಬ್ಬಾಗಿದ ಪೋಟೊವನ್ನು ತಂದ.ನಂಜೇಗೌಡರು ಸಿದ್ದ ಬಂದೊಡನೆ ಕೈನಲ್ಲಿದ್ದ ಹಣ್ಣುಕಾಯಿಯ ಕವರನ್ನು ಹಿಡಿದುಕೊಳ್ಳಲು ಕೊಟ್ಟು,ಬೈಕಿನಲ್ಲಿ ಸಿದ್ದನೊಡನೆ ಹೊರಟರು.ದಾರಿಯಲ್ಲಿಸಿಗುವ ದೇವಿರಮ್ಮನ ದೇವಸ್ಥಾನದ ಬಳಿ ಬೈಕು ನಿಲ್ಲಿಸಿ ಒಳನಡೆದರು.ಸಿದ್ದನು ಗೌಡರನ್ನು ಅನುಸರಿಸಿದನು.ಪುರಾತನವಾದ ದೇವಸ್ಥಾನ.ಗೌಡರು,ಮಂಜ ಸುರಕ್ಷಿತವಾಗಿ ಬಂದರೆ ನೂರೊಂದು ಕಾಯಿ ಹೊಡೆಯುವುದಾಗಿ ಬೇಡಿಕೊಂಡರು.ನಂತರ ಇಬ್ಬರು ಪ್ರಸಾದ ಸ್ವೀಕರಿಸಿ ಪ್ಯಾಟೆಯ ಕಡೆ ಬೈಕಿನಲ್ಲಿ ಹೊರಟರು.ಅತ್ತ ದೇವಸ್ಥಾನದ ಜಗಲಿಯ ಮೇಲೆ ಮಲಗಿದ ಮಂಜನನ್ನು ಯಾರೋ ಎಬ್ಬಿಸಿದರು.ಮಂಜ ತನ್ನ ನಿದ್ದೆಗಣ್ಣನ್ನು ಬಲವಂತವಾಗಿ ತೆರೆದು ನೋಡಿದ.ಎದುರಿಗೆ ದೇವಸ್ಥಾನದ ಭಟ್ಟರು ನಿಂತಿದರು.ಮಂಜ ಹಿಂದಿನ ರಾತ್ರಿ ನಡೆದದ್ದನ್ನೆಲ್ಲಾ ಭಟ್ಟರಿಗೆ ಹೇಳಿದ.ಭಟ್ಟರು ಬೆಳಗಾಗಿ ಎದ್ದು ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಬರುವುದಾಗಿ ಭರವಸೆಯನ್ನು ನೀಡಿದ್ದರು.ಅತ್ತ ನಂಜೇಗೌಡರ ಬೈಕು ನಖರ ಪೋಲಿಸ್ ಠಾಣೆಟ ಎದುರು ನಿಂತಿತ್ತು.ನಂಜೇಗೌಡರು ಪೋಲಿಸರಿಗೆ ದೂರು ಬರೆದು,ಮಂಜನ ಪೋಟೋವನ್ನು ಕೊಟ್ಟು ಆದಷ್ಟು ಬೇಗ ಹುಡುಕಿಕೊಡಬೇಕಾಗಿ ಕೇಳಿಕೊಂಡರು.ಪೋಲಿಸ್ ಠಾಣೆಯಿಂದ ಹೊರಬಂದ ನಂಜೇಗೌಡರು ಸಿದ್ದನನ್ನು ಅಲ್ಲೇ ಇರಲು ಹೇಳಿ ಗೆಳೆಯರು ಸಿಕ್ಕರೆ ಅವರಿಗೂ ಮಂಜನನ್ನು ಹುಡುಕಲು ಹೇಳಬಹುದೆಂದು ಎತ್ತಲ್ಲೋ ಹೊರಟುಹೋದರು.ಸಿದ್ದ ಪೋಲಿಸ್ ಠಾಣೆಯ ಹೊರಭಾಗದ ಕಟ್ಟೆಯ ಮೇಲೆ ಕುಳಿತು ಬೀಡಿ ಹಚ್ಚಿಕೊಂಡು ಯೋಚಿಸುತ್ತಾ ಹೊಗೆ ಬಿಡತೊಡಗಿದ.ಸಿದ್ದನಿಗೆ ಮಕ್ಕಳನ್ನು ಅಪಹರಿಸಿ ಅಂಗಾಂಗಗಳನ್ನು ತೆಗೆಯುವವರು,ಮಕ್ಕಳನ್ನು ಬಲಿಕೊಡುವ ಭಯಂಕರ ಕ್ರೂರ ಮಾಂತ್ರಿಕರ ಚಿತ್ರ ಕಣ್ಮಂದೆ ಸುಳಿದು ಆತಂಕ ಹೆಚ್ಚಾಯಿತು.ಮನದಲ್ಲೇ ನಂಜೇಗೌಡರ ತೋಟದ ದೈವ ಭೂತಪ್ಪನನ್ನು ನೆನೆದು ನನ್ನ ಮಗ ಸುರಕ್ಷಿತವಾಗಿ ಹಿಂದುರುಗಿದರೆ ಕೋಳಿಯನ್ನು ಬಲಿಕೊಡುವುದಾಗಿ ಬೇಡಿಕೊಂಡ.ಅದೇ ಗುಂಗಿನಲ್ಲಿ ಸೇದುತ್ತಿರುವ ಬೀಡಿಯ ತುಂಡನ್ನು ಎಸೆದು ಮತ್ತೊಂದು ಬೀಡಿ ಹಚ್ಚಿಕೊಂಡು ಎಳೆದು ಎಳೆದು ಸುರುಳಿ,ಸುರುಳಿಯಾಗಿ ಹೊಗೆ ಬಿಡತೊಡಗಿದ.ಸಿದ್ದನಿಗಿದ್ದ ಮತ್ತೊಂದು ಚಿಂತೆಯೆಂದರೇ ಚಂದ್ರಿಗೆ ಹೇಗೆ ವಿಷಯ ತಿಳಿಸುವುದೆಂಬುದು.ಒಂದು ವೇಳೆ ವಿಷಯ ತಿಳಿದರೆ ಅದರ ಪರಿಣಾಮ ಹೀಗೆ ಇರುವುದೆಂದು ಹೇಳಲಾಗುವುದಿಲ್ಲ.ಯಾಕೆಂದರೆ ಹಿಂದೆ ಚಂದ್ರಿಯ ರೌದ್ರವತಾರದ ದರ್ಶನ ಸಿದ್ದನಿಗೆ ಆಗಿತ್ತು.ಹಿಂದೊಮ್ಮೆ ಸಿದ್ದ,ಪಕ್ಕದ ಹಳ್ಳಿಗೆ ಕಳ್ಳಭಟ್ಟಿ ಕುಡಿಯಲು ಹೋಗಿದ್ದ.ಪ್ಯಾಕೆಟ್ ಸಾರಾಯಿಯ ಮಾರಾಟ ಸರ್ಕಾರ ನಿಲ್ಲಿಸಿದ ಮೇಲೆ ಭಟ್ಟಿ ಸಾರಾಯಿಯೇ ಸಿದ್ದನಂಥಹ ಬಡವರ್ಗದ ಕುಡುಕರಿಗೆ ಅನಿವಾರ್ಯವಾಯಿತು.ಕಳ್ಳಭಟ್ಟಿಯಕುಡುಕ ಗ್ರಾಹಕರ ಸಂಖ್ಯೇ ಹೆಚ್ಚಾದಂತೇ,ಎಲ್ಲೋ ಒಂದೋ ಎರಡೋ ಮನೆಯಲ್ಲಿದ್ದ ಕಳ್ಳಭಟ್ಟಿ ವ್ಯಾಪಾರ ಎರಡು ಮನೆಗೊಂದರಂತೇ ಪ್ರಾರಂಭವಾಯಿತು.ಸಣ್ಣಪುಟ್ಟ ಗೂಡಂಗಡಿಗಳೆಲ್ಲ ಮಿನಿಬಾರುಗಳಂತೇ ತೋರತೊಡಗಿದವು.ಬೆಟ್ಟದೂರಿನ ಮಹಮದ್ ಕಾಕನ ಅಂಗಡಿಯ ಪ್ಲಾಸ್ಟಿಕ್ ಕೊಡಗಳೆಲ್ಲ ಹೇಳಹೆಸರಿಲ್ಲದಂತೇ ಖರ್ಚಾಗಿ ಹೋಯಿತು.ಅದರ ಜೊತೆಗೆ ಕಪ್ಪುಬೆಲ್ಲದ ವ್ಯಾಪಾರ ಭರ್ಜರಿಯಾರಿ ನಡೆಯತೊಡಗಿತ್ತು.ಜೀಪುಕಾರುಗಳನ್ನೇ ಕಂಡಿರದ ಬೆಟ್ಟದೂರಿನ ರಸ್ತೆಯಲ್ಲಿ ಈಗ ದಿನಕ್ಕೊಂದು ಐದಾರು ಬಾರಿ ಕಳ್ಳಭಟ್ಟಿ ಹಿಡಿಯುಲ ಸ್ಕ್ವಾಡಿನ ಜೀಪುಗಳು ಓಡಾಡತೊಡಗಿದವು.ಈ ವಾತಾವರಣ ಇದ್ದಾಗಲೇ ಸಿದ್ದ ಕಳ್ಳಭಟ್ಟಿ ತರಲೆಂದು ಹೋಗಿದ್ದು.ಸಿದ್ದ ಕಳ್ಳಭಟ್ಟಿಯ ಶೀಶೆಯನ್ನು ಜೇಬಿನಲ್ಲಿಟ್ಟುಕೊಂಡು ರಸ್ತೆಬದಿ ನಡೆದು ಬರುವಾಗ ಸ್ಕ್ವಾಡಿನ ಜೀಪು ರಸ್ತೆಯ ಪಕ್ಕ ನಿಂತಿರುವುದು ಕಂಡಿತು.ಯಾವುದೇ ಯೋಚನೆಯಲ್ಲಿದ್ದ ಸಿದ್ದ ಜೀಪಿಗೆ ಒರಗಿ ನಿಂತ ಸ್ಕ್ವಾಡಿನವನನ್ನು ಗಮನಿಸಲಿಲ್ಲ.ಆದರೆ ಸಿದ್ದನ ಜೇಬಿನ ಗಳಕ್ ಗಳಕ್ ಶಬ್ಧ ಸ್ಕ್ವಾಡಿನವನನ್ನು ಆಕರ್ಷಿಸಿ,ಸಿದ್ದನಿಗೇ ನಿಲ್ಲಲು ಹೇಳಿದ.ಸಿದ್ದ ಮುಂದೆ ನಡೆದರೆ ಬಾಟಲಿಯ ಶಬ್ಥ ಕೇಳಬಹುದೆಂದು ದೂರಕ್ಕೆ ನಿಂತ.ಸ್ಕ್ವಾಡಿನವನು ಸಿದ್ದನನ್ನು ಜೀಪು ಹತ್ತಲೂ ಹೇಳಿ,ಇತರ ಸಂಗಡಿಗರ ಬರುವಿಕೆಗಾಗಿ ಕಾಯುತ್ತಾ ಜೀಪಿನಲ್ಲಿ ಕುಳಿತ.ಇತ್ತ ಯಾರಿಂದಲೋ ವಿಷಯ ತಿಳಿದ ಚಂದ್ರಿ,ಎದ್ದನ್ನೋ ಬಿದ್ದೆನ್ನೋ ಎಂದು ಜೀಪಿನೆಡೆಗೆ ಬಂದಳು.ಬರುವಾಗ ಬಡಿಗೆ ಹಿಡಿದು ತಯಾರಾಗೇ ಬಂದಿದ್ದಳು.ಬಾಯಿ ತುಂಬ ಇದ್ದ ಎಲೆಅಡಿಕೆ ಉಗಿದು,ಜೀಪಿಗೆ ಒರಗಿ ನಿಂತು ಸಿಗರೇಟು ಸೇದುತ್ತಿದ ಸ್ಕ್ವಾಡಿನವನನ್ನು ಎಳೆದು ಕೆಳಗೆ ಹಾಕಿ ಬಾರಿಸತೊಡಗಿದಳು.'ಬ್ಯಾರಲ್ ಗಟ್ಟಲೇ ತುಂಬಿಸಿ ಇಟ್ಕಂಡಿರೋ ಕಳ್ಳಭಟ್ಟಿ ಇಡಿಯದ್ ಬುಟ್ ಬುಟ್ಟು.ಇಲ್ಲಿ ಬೀದಿಲ್ಲಿ ಹೋಗ್ಬರೋಗೆಲ್ಲ ಅಡ್ಡಹಾಕಿ ತೊಂದರೆ ಕೊಡ್ತೀಯಾ'ಎಂದು ಚಂದ್ರಿ ಬೈಯತೊಡಗಿದಳು.ಸಿದ್ದ,ಚಂದ್ರಿಯ ರೌದ್ರವತಾರವನ್ನು ಕಂಡು ಚಂದ್ರಿಯನ್ನು ಅಲ್ಲಿಂದ ಕರೆದುಕೊಂಡು ಹೋದ.ಸಿದ್ದ ಪೋಲಿಸ್ ಸ್ಟೇಷನಿನ ಹೊರಗೆ ಹೀಗೆ ಯೋಚಿಸುತ್ತಾ ಕುಳಿತವನು,ಸೇದುತ್ತಿದ್ದ ಬೀಡಿಯ ಬೆಂಕಿ ಕೈಗೆ ತಗುಲಿದಾಗ ಯೋಚನೆಯಿಂದ ಹೊರಬಂದ.ಆ ವೇಳೆಗೆ ನಂಜೇಗೌಡರು ಬಂದರು.ಸಿದ್ದನ ಕೈಗೆ ಸ್ವಲ್ಪ ಹಣವನ್ನು ಕೊಟ್ಟು ಬಸ್ ನಲ್ಲಿ ಹೋಗಬೇಕೆಂದು ನಾನು ಸ್ವಲ್ಪ ಕೆಲಸ ಮುಗಿಸಿಕೊಂಡು ಮತ್ತೆ ಬರುತ್ತೇನೆಂದು ಹೇಳಿ ಬೈಕಿನಲ್ಲಿ ಬಸ್ ನಿಲ್ದಾಣದ ಬಳಿ ಇಳಿಸಿ ಹೋದರು.ಬೆಟ್ಟದೂರಿಗೆ ಹೋಗುವ ಹಸಿರು ಬಣ್ಣದ ಮಾರುತಿ ಬಸ್ಸು ಆಗಲೇ ಬಂದು ನಿಂತಿತ್ತು.ಬಸ್ಸು ಹೊರಡಲು ಇನ್ನೂಹಾಕಷ್ಟು ಸಮಯವಿತ್ತು.ಸಿದ್ದ ಬಸ್ಸಿನಿಂದ ಸ್ವಲ್ಪ ದೂರಕ್ಕೆ ಹೋಗಿ ಮರೆಯಲ್ಲಿ ನಿಂತು ಬೀಡಿಸೇದತೊಡಗಿದ.
ಚಂದ್ರಿಗೆ ಏನೆಂದು ಹೇಳುವುದು ಎನ್ನುವುದು ಸಿದ್ದನಿಗೆ ತೋಚಲಿಲ್ಲ.ಚಂದ್ರಿಗೆ ವಿಷಯ ತಿಳಿದರೆ ಅದೆಷ್ಟು ನೊಂದುಕೊಳ್ಳತ್ತಾಳೋ.ಏನು ರಂಪ ಮಾಡಿ ಬಿಡುತ್ತಾಳೋ ಎನ್ನುವುದು ಊಹಿಸಲು ಸಾಧ್ಯವಿರಲಿಲ್ಲ.ಅದೇ ಗುಂಗಿನಲ್ಲಿ ಬಾಡಿದ ಮುಖಭಾವದಿಂದ ಸುತ್ತಲ್ಲ ದೃಶ್ಯವನ್ನು ಯಾಂತ್ರಿಕವಾಗಿ ನೋಡುತ್ತಾ ನಿಂತ.ಹಾಗೇ ನೋಡುತಿರುವಾಗಲೇ ದೂರದಲ್ಲಿ ಮಂಜನಂತೇ ತೋರುವ ಆಕಾರವೊಂದು ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆದು ಬರುತ್ತಿರುವಂತೇ ತೋರಿತು.ಸೇದುತ್ತಿದ್ದ ಬೀಡಿಯನ್ನು ಎಸೆದು ಸಿದ್ದ,ಆ ಕಡೆಗೆ ಹೆಜ್ಜೆ ಹಾಕತೊಡಗಿದ.ಹತ್ತಿರ ಹತ್ತಿರವಾಗುತ್ತಿದಂತೇ ಆಕಾರ ಸ್ಪಷ್ಟವಾಗಿ ಮಂಜ,ಪೇಟೆ ದೇವಿರಮ್ಮನ ಅರ್ಚಕರೊಡನೆ

ಕಥೆ;ಪ್ಯಾಟೆ4

ಮಂಜ ತುಂಬಾ ದೂರ ಬಂದ ನಂತರ ಕ್ಯಾಂಟಿನಿನ ಕಾಕನಿಗೆ ಹೇಳದೇ ಬಂದದ್ದು ನೆನಪಾಯಿತು.ಕತ್ತಲೆಯಲ್ಲಿ ಸಮಯ ಅಂದಾಜು ಮಾಡಲಾಗಲಿಲ್ಲ.ಆದರೆ ತಾನು ಹೊರಟು ತುಂಬ ಹೊತ್ತಾಗಿರುವುದು ತಿಳಿಯಿತು.ಹಿಂದಿರುಗಿ ಹೋಗುವುದೆಂದು ನಿರ್ಧರಿಸಿ ಬೇಗ ಬೇಗ ನಡೆಯತೊಡಗಿದ.ಬೀದಿಬದಿಯ ಪಾನಿಪೂರಿ,ಗೋಬಿಮಂಚೂರಿ ಗಾಡಿಗಳು ಅಂದಿನ ಕೆಲಸ ಮುಗಿಸಿ ಮನೆಯ ಕಡೆಗೆ ಸಾಗುತ್ತಿದ್ದವು.ಬರಬರುತ್ತಾ ವಾಹನಗಳ ಓಡಾಟ ಕಡಿಮೆಯಾಗಿ ಬಣ್ಣಬಣ್ಣದ ದೀಪಗಳಿಂದ ಜಗಮಗಿಸುವ ಅಂಗಡಿಮುಂಗಟುಗಳು ಬಾಗಿಲು ಹಾಕಿ ಬೋಳುಬೋಳಾಗಿ ಕಾಣತೊಡಗಿತ್ತು.ಬೀದಿದನಗಳು ರಸ್ತೆಯ ಮೇಲೆ ಮಲಗಿ ಮೆಲುಕು ಹಾಕತೊಡಗಿದವು.ಒಟ್ಟಿನಲ್ಲಿ ಗಂಧರ್ವಲೋಕದ ತುಣುಕೊಂದರಂತೇ ಕಂಡ ಪ್ಯಾಟೆ ಖಾಲಿಖಾಲಿಯಾಗಿ ಕಾಣತೊಡಗಿತ್ತು.ನಿರ್ಜನವಾಗಿದ್ದ ಬೀದಿಗಳನ್ನು ಕಂಡು ಮಂಜನಿಗೆ ಗಾಬರಿಯಾಯಿತು.ಬೇಗಬೇಗ ಹೆಜ್ಜೆ ಹಾಕತೊಡಗಿದ್ದ.ಸ್ವಲ್ಪ ದೂರಬಂದ ಮೇಲೆ ದಾರಿ ಇದ್ದಲ ಎನಿಸಿ,ಹಿಂದಕ್ಕೆ ಮುಖ್ಯರಸ್ತೆಗೆ ಬಂದು ಬೋರ್ ವೆಲ್ ಇದ್ದ ಎಡರಸ್ತೆಗೆ ತಿರುಗಿದ.ಈಗ ಅಲ್ಲಿ ಮೊದಲು ನೋಡಿದ ಅಂಗಡಿ ಮಳಿಗೆಗಳ ಬದಲು ಮಹಡಿ ಮನೆಗಳು ಕಂಡು ಬಂದವು.ಮಂಜನಿಗೆ ಯಾಕೋ ದಾರಿ ಮಸುಕು ಮಸುಕಾಗತೊಡಗಿತ್ತು.ಏನು ಮಾಡಲು ತೋಚದೇ ಅಳುತ್ತಾ ಕಾಲು ತಿರುಗದತ್ತ ಹೆಜ್ಜೆ ಹಾಕತೊಡಗಿದ್ದ.ಮನದಲ್ಲಿ ಅವ್ಯಕ್ತ ಭಯ ಮನೆ ಮಾಡಿತ್ತು.ಅಳುತ್ತಾ ದೇವರಲ್ಲಿ ಮೊರೆಯಿಟ್ಟ.ಮಂಜನ ಕೂಗು ದೇವರಿಗೆ ಕೇಳಿಸಿತ್ತೋ ಏನ್ನೋ?.ದೂರದಲ್ಲಿ ಬಾರಿ ಜನಸಂದಣಿ ನೆರೆದಿತ್ತು.ಪೇಟೇ ಪುರದಮ್ಮನ ದೇವಸ್ಥಾನದ ಅನ್ನ ಸಂತರ್ಪಣೆ ನಡೆಯುತಿತ್ತು.ಸಾಯಂಕಾಲ ಒಂದು ಬನ್ನನ್ನು ತಿಂದ ಮಂಜನಿಗೆ ಹಸಿವು ದಿಡೀರನೇ ಗಮನಕ್ಕೆ ಬಂತು.ಮೊದಲು ಹೊಟ್ಟೆ ತುಂಬಿಸಿ ನಂತರ ಉಳಿದ ವಿಚಾರ ಎಂದು ಕೊಂಡವನೇ ಜನರ ಸಾಲಿನ ಕೊನೆಗೆ ನಿಂತ.ಸಣ್ಣಗೆ ಮಳೆ ಬೀಳಲು ಪ್ರಾರಂಭಿಸಿತು.ಇತ್ತ ಗೌಡರು ಬಾರಿನ ಮಂದ ಬೆಳಕಿನ ಕೆಳಗೆ ಗೆಳೆಯರೊಡನೇ ಕುಡಿಯುತ್ತಾ ಲೋಕವನ್ನೇ ಮರೆತಿದ್ದರು.ಬಾರ್ ಬಾಗಿಲು ಹಾಕುವ ವೇಳೆಗೆ ತೂರಾಡತೊಡಗಿದರು.ಅವರಿಗೆ ಮಂಜನು ಜೊತೆಗೆ ಬಂದದಾಗಲಿ,ಡೀಸೆಲನ ವಿಚಾರವಾಗಲಿ ನೆನಪಾಗುವ ಸ್ಥಿತಿಯಲಿರಲ್ಲಲ್ಲ.ಬಾರಿನಿಂದ ಹೊರಟು ಗೆಳೆಯರನ್ನು ಬೀಳ್ಕೊಟು ತಮ್ಮ ಬೈಕನೇರಿ ಹೊರಟರು.ಕಾಕನ ಕ್ಯಾಂಟಿನ್ ಆ ಹೊತ್ತಿಗೆ ಬಾಗಿಲು ಹಾಕಿತ್ತು.ನಂಜೇಗೌಡರ ಬೈಕು ರಾತ್ರಿಯ ಮೌನಕ್ಕೆ ಅಣಿಯಾಗುತ್ತಿದ್ದ ಪ್ಯಾಟೆಯನ್ನು ಬಿಟ್ಟು ಮೌನವೇ ಮೈದಳೆದಂತಿರುವ ಬೆಟ್ಟದೂರಿನ ಕಡೆಗೆ ಹೊರಟಿತು.ಕಾಫಿತೋಟಗಳ ಮದ್ಯೆ ಹೊರಟ ರಸ್ತೆ.ಕಾಡುಗತ್ತಲೆ.ಭಯಹುಟ್ಟಿಸುವ ಗಾಡಮೌನದ ಮದ್ಯೆ ಯಾರು ಒಬ್ಬಂಟಿಯಾಗಿ ಓಡಾಡುವ ಸಾಹಸ ಮಾಡುವುದಿಲ್ಲ.ಅದು ಅಲ್ಲದೇ ಹಳ್ಳಿಗರ ಹಾರರ್ ಕಥೆಗಳು ಹೆಚ್ಚಾಗಿ ಈ ರಸ್ತೆಯ ಕೆಲವು ಜಾಗಗಳಿಂದ ಪ್ರಾರಂಭವಾಗುವುದು.ನಂಜೇಗೌಡರು ಅದು ಹೇಗೆ ಬೆಟ್ಟದೂರನ್ನು ತಲುಪಿದರೋ ದೇವರೇ ಬಲ್ಲ.ಬಹುಶಃ ಮತ್ತಿನ ಗಮ್ಮತಿರಬಹುದೇನೋ? ಗೌಡರು ಮನೆ ತಲುಪಿ ಬಾಗಿಲನ್ನು ಸವರುತ್ತಾ ಒಳನಡೆದಾಗ ಅದಾಗಲೇ ಮದ್ಯರಾತ್ರಿ ದಾಟಿತು.
ಮಂಜನನ್ನು ಕರೆತರದಿದ್ದ ವಿಷಯ ಸದ್ಯಕ್ಕೆ ಮಂಜನ ತಂದೆ ತಾಯಿಯರಿಗೆ ತಿಳಿಯುವಂತಿರಲಿಲ್ಲ.ಏಕೆಂದರೆ ಮಂಜ ಗೌಡರ ಜೊತೆಗೆ ಬಂದಿದ್ದರೂ,ಗೌಡರ ಮನೆಯಲ್ಲಿ ಮಲಗಿ,ಬೆಳಗಾಗಿ ತನ್ನ ಮನೆಗೆ ಹೋಗುತ್ತಿದ.ಇನ್ನೂ ಗೌಡರ ಮನೆಯಲ್ಲಿ ಮಡದಿ,ಮಕ್ಕಳು ಆಗಲೇ ಮಲಗಿದರು.ನಂಜೇಗೌಡರು ವಾರದಲ್ಲಿ ಒಮ್ಮೆ ಪ್ಯಾಟೆಗೆ ಹೋಗಿ ಬರುವುದು ಖಾಯಂ ಆದಾಗಿನಿಂದ ಮನೆಗೆ ಬರುವುದು ತಡವಾಗುತ್ತಿತ್ತು.ಗೌಡರೇ ಊಟ ಬಡಿಸಿಕೊಂಡು ಮಲಗತಿದ್ದರು.ಹೀಗಾಗಿ ಮಂಜನ ನಾಪತ್ತೆ ಸದ್ಯಕ್ಕೆ ತಿಳಿಯುವಂತಿರಲಿಲ್ಲ.ಬೆಳ್ಳಗೆ ನಂಜೇಗೌಡರ ಮಡದಿ "ಮಂಜ ಎಲ್ಲಿ?,ಬೆಳಿಗೇನೇ ಮನಿಗೋದ್ನಾ?" ಎಂದು ಕೇಳುವವರೆಗೂ ಗೌಡರಿಗೆ ಮಂಜನ ವಿಚಾರ ನೆನಪಾಗಿರಲಿಲ್ಲ.ಈಗ ಓಂದೊಂದಾಗಿ ನೆನಪಾಗತೊಡಗಿ ಅಲ್ಪಸ್ವಲ್ಪ ಇದ್ದ ಅಮಲು ಇಳಿದು ಹೋಯಿತು.
ಅತ್ತ ಮಂಜನ ತಂದೆ ಸಿದ್ದ,ಮಂಜನ ತಾಯಿ ಚಂದ್ರಿ-ಮಂಜ ಬೆಳಗಾಗಿ ಮನೆಗೆ ಬರುವವನು ಯಾಕೆ ಬರಲಿಲ್ಲ ಎಂದು ಅನುಮಾನಗೊಂಡರು.ಇಬ್ಬರು ಬೆಳಗ್ಗೆ ನಂಜೇಗೌಡರ ತೋಟದ ಕೆಲಸಕೆಂದು ಗೌಡರ ಬಂಗಲೆಯ ಬಳಿ ಬಂದರು.ನಂಜೇಗೌಡರು ಏನೂ ಮಾಡಲು ತೋಚದೇ ಸಿದ್ದನಿಗೆ ಏನೆಂದು ಹೇಳುವುದು.ಆ ವಾಚಾಳಿ ಚಂದ್ರಿಯಂತು ವಿಷಯ ತಿಳಿದರೆ ರಂಪ ಮಾಡಿಬಿಡುತ್ತಾಳೆ ಎಂದು ಆತಂಕಗೊಂಡರು.ಆ ವೇಳೆಗೆ ಸಿದ್ದ ಅಂಗಳದಲ್ಲಿ ನಿಂತು 'ಗೌಡ್ರೇ' ಎಂದು ಕೂಗಿದ್ದು ಕೇಳಿಸಿತ್ತು.ನಂಜೇಗೌಡರು ಮನದಲ್ಲಿ ಅಳುಕಿದರೂ ತೋರಿಸಿಕೊಳ್ಳದೇ 'ಏನಾ ಸಿದ್ದ,ಆ ಲೈನ್ ಹಿಂದಗಡೆ ತೋಟ್ದಲ್ಲಿ ಕೆಲ್ಸ ಇಡೀರಿ.ಇನ್ನೊಂದಿಷ್ಟ್ ಆಳನ ಕಳ್ಸ್ತೀನಿ.ಅಮ್ಮೋರ್ ಹತ್ರ ಕಸಿ ಕ್ತಿ ಇಸಕಂಡು ಹೋಗಿ'ಎಂದು ಪ್ರತಿದಿನ ಕೆಲಸ ಹೇಳುವಂತೇ ಹೇಳಿ

ಕಥೆ:ಪೇಟೆ-೩

ಆ ವೇಳೆಗೆ ನಂಜೇಗೌಡರ ಗೆಳೆಯರ ನಾಲ್ಕು ಬೈಕುಗಳು ಬಂದು ನಿಂತವು.ಅವರೆಲ್ಲರನ್ನು ಮಂಜ,ನಂಜೇಗೌಡರ ಮನೆಗೆ ಬಂದಾಗ ನೋಡಿದ.ನಂಜೇಗೌಡರ ಗೆಳೆಯರ ಬಗ್ಗೆ ಬೆಟ್ಟದೂರಿನಲ್ಲಿ ಗುಸುಗುಸು ಮಾತುಗಳನ್ನು ಕೇಳಿದ ಮಂಜ,ಇವರೇಕೇ ಇಲ್ಲಿ ಬಂದರೂ ಎಂದುಕೊಂಡ.ಮಂಜನ ಬಳಿ ಬಂದ ನಂಜೇಗೌಡರು'ಲೋ ಮಂಜ ಇಲ್ಲೆ ಕೂತ್ಕಾ,ನಾನು ಡಿಸೀಲ್ ತಗಾಂಡು ಇತ್ಲಾಗ್ ಬರ್ರ್ತೀನಿ,ಎಲ್ಲಿಗೂ ಹೋಗಬೇಡ ಆಯ್ತಾ?.ತಗಾ ಇ ದುಡ್ಡು,ಏನಾರಬೇಕಾರೇ ತಗಾ ಆಯ್ತಾ?' ಎಂದು ಹೇಳಿ ಗೆಳೆಯರೊಡನೆ ಹೊರಟುಹೋದರು.ಮಂಜ ಕಾಕನ ಕ್ಯಾಂಟಿನಿನ ಹೊರಗೆ ಹಾಕಿದ ಬೇಂಚಿನ ಮೇಲೆ ಕುಳಿತು,ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡತೊಡಗಿದ.ಅದಾಗಲೇ ಸಂಪೂರ್ಣ ಕತ್ತಲಾವರಿಸಿ,ಸೊಳ್ಳೆಗಳು ಕಾಟಕೊಡಲಾರಂಬಿಸಿದವು.ತುಂಬಾ ಹೊತ್ತಿನಿಂದ ಕುಳಿತು ಬೇಸರವಾಗತೊಡಗಿತ್ತು.ಮಂಜನ ಗಮನಿಸಿದ ಕ್ಯಾಂಟಿನಿನ ಕಾಕ ತಮ್ಮ ಎಂದಿನ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಒಳಗೆ ಬಂದು ಕೂರಲು ಹೇಳಿ ಅರ್ಧಕಾಫಿಯನ್ನು ಕೊಟ್ಟು,ತಾವು ಕಾಫಿ ಕುಡಿಯತೊಡಗಿದರು.ಮಂಜ ಕಾಫಿ ಕುಡಿದು ಮುಗಿಸಿ ಯೋಚಿಸತೊಡಗಿದ್ದ.'ಗೌಡ್ರು ಬರದು ಇನ್ನೂ ಲೇಟು,ಒಂದು ರೌಂಡು ಯಾಕ್ ಹೋಗಬಾರದು,ಎಲ್ಲಾದ್ರು ಮೇಷ್ಟ್ರು ಕಂಡ್ರು ಕಾಣಬಹುದು'ಎಂದು ಬೀದಿಗಿಳಿದು ನಡೆಯತೊಡಗಿದ.ಹಿಂದೆ ಬರಲು ದಾರಿ ತಿಳಿಯಲೆಂದು ಲೈಟು ಕಂಬವನ್ನು,ಬೋರುವೆಲ್ಲನ್ನು ಗುರುತಾಗಿಟ್ಟುಕೊಂಡು ಹೆಜ್ಜೆ ಹಾಕತೊಡಗಿದ್ದ.ತನ್ನ ಮೆಚ್ಚಿನ ಮೇಷ್ಟ್ರರು ಕಾಣಬಹುದೆಂದು ಸುತ್ತಮುತ್ತ ಕಣ್ಣಾಡಿಸುತ್ತಾ ಮುಂದೆ ಸಾಗತೊಡಗಿದ್ದ.ಮಂಜನಿಗೆ ಮೇಷ್ಟ್ರು ಹೇಳುತ್ತಿದ್ದ ಸಂಗತಿಗಳು ನೆನಪಾದವು.ಬೆಳೆಯುವ ಮಕ್ಕಳು, ಆದರ್ಶ ಪುರುಷರ ಜೀವನವನ್ನು ಅರಿಯಬೇಕೆಂದು,ಗಾಂಧೀಜೀಯ ಆತ್ಮಕಥೆಯ ಪುಸ್ತಕವನ್ನು ಓದಲು ಕೊಟ್ಟದು,ಪುಸ್ತಕವನ್ನು ತೊರೆಯ ಪಕ್ಕದ ಹುಲ್ಲಿನ ಮೇಲೆ ಕುಳಿತು,ಜೇನುಗುಡ್ಡದ ಮೇಲೆ,ಮಾವಿನ ಮರದ ಕೊಂಬೆಯ ಮೇಲೆ,ಕರೆಂಟಿಲ್ಲದ ತನ್ನ ಮನೆಯ ಚಿಮಣಿಯ ದೀಪದ ಬೆಳಕಿನಲ್ಲಿ,ಕುಳಿತು ಓದಿದ್ದು ನೆನಪಾಯಿತು.ಅದಕ್ಕಿಂತಲೂ ಒಂದು ಭಾನುವಾರ ನಾಲ್ಕೈದು ಹುಡುಗರೊಡನೆ ಮೇಷ್ಟ್ರರು ಜೇನುಗುಡ್ಡಕ್ಕೆ ಹೋದಾಗಿನ ಅನುಭವ ಮರೆಯುವಂತಾಹದಲ್ಲ.ಅಂದು ಎಷ್ಟೊಂದು ವಿಚಾರಗಳ ಬಗ್ಗೆ ಹೇಳಿದರು.'ಪ್ರಕೃತಿ ರಹಸ್ಯಗಳ ಗಣಿ,ಪ್ರಕೃತಿ ಮುನಿದರೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ,ಪ್ರಕೃತಿಯ ನಾಶ,ಪರೋಕ್ಷವಾಗಿ ಮಾನವನ ನಾಶ,ಅದರ ಪರಿಣಾಮ ಈಗ ಆಗದಿದ್ದರೂ ಮುಂದಿನ ಪೀಳಿಗೆಗೆ ಅದರ ಪ್ರಭಾವ ಆಗೇ ಆಗುತ್ತದೆ'ಎಂದದ್ದು.'ನಿಮ್ಮ ನಮ್ಮೆಲ್ಲರ ಹಿರಿಯರು ಶೋಷಣೆಗೆ ಗುರಿಯಾಗಲು ಕಾರಣ, ಅವರ ಅಜ್ಞಾನ ಮತ್ತು ಮುಗ್ಧತೆ.ಶೋಷಣೆಯಿಂದ ಹೊರಬರಬೇಕಾದರೇ ಶಿಕ್ಷಣವೊಂದೇ ದಾರಿ.ನಮ್ಮ ಹಿರಿಯರು ಶಿಕ್ಷಣದಿಂದ ವಂಚಿತರಾದರು.ಶಿಕ್ಷಣದ ಸಿಹಿಯನ್ನು ಕಹಿಯೆಂದು ತಿಳಿದರು.ಅವರ ಕಾಲ ಮುಗಿಯಿತು.ಆದರೆ ಶೋಷಣೆ ಇನ್ನೂ ನಿಂತಿಲ್ಲ.ಮುಂದಿನ ಪೀಳಿಗೆಯವರಾದ ನೀವುಗಳು ಶೋಷಣೆಯಿಂದ ಮುಕ್ತರಾಗಬೇಕಾದರೆ ಶಿಕ್ಷಣ ಪಡೆಯಲೇಬೇಕು'ಎಂದು ಭರವಸೆ ಮೂಡಿಸಿದು ನೆನಪಾಯಿತು.

ಕಥೆ:ಪೇಟೆ-೨

ಆದರೆ ಗೌಡರ ಯೋಚನೆಯೇ ಬೇರೆಯಿತ್ತು.ಗೌಡರು ಪೇಟೆಗೆ ಬಂದಿದ್ದು ಡಿಸೇಲ್ ಕೊಳ್ಳಲಾದರೂ,ಅದು ಮಾತ್ರ ಕಾರಣವಾಗಿರಲಿಲ್ಲ.ನಂಜೇಗೌಡರ ಅನೇಕ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು.ಅವರ ಇತರ ಕುಡುಕ ಗೆಳೆಯರು ತಮ್ಮ-ತಮ್ಮ ಮನೆಗಳಲ್ಲಿ ನೆಪ ಹೇಳಿ ಪೇಟೆ ತಿರುಗಲು ಬರುತ್ತಿದರು.ವಾರದ ಒಂದು ದಿನ ಎಲ್ಲರೂ ಕೂಡಿ ಗುಂಡುಪಾರ್ಟಿ ಮಾಡುವುದು ಮಾಮೂಲಾಗಿತ್ತು.ಇ ದಿನದ ಪಾರ್ಟಿಗೆ ಪೇಟೆಗೆ ಬರಲು ಡೀಸೆಲ್ ತರುವುದು ನೆಪ ಮಾತ್ರವಾಗಿತ್ತು.ಆದರೆ ನಂಜೇಗೌಡರು ಮುಚ್ಚುಮರೆ ಮಾಡುವುದು ಅಗತ್ಯವಿತ್ತು.ಬೆಟ್ಟದೂರಿನಲ್ಲಿ ನಂಜೇಗೌಡರ ವಂಶಕ್ಕೆ ಗೌರವವಿತ್ತು.ಬೆಟ್ಟದೂರಿನ ಗ್ರಾಮದೇವತೆ ದೇವಿರಮ್ಮನ ದೇವಸ್ಥಾನದ ನಿರ್ವಣನೆಯ ಜವಾಬ್ದಾರಿ ಹಿಂದಿನಿಂದಲೂ ನಂಜೇಗೌಡರ ವಂಶದವರದಾಗಿತ್ತು.ಅದು ಇಲ್ಲದೇ ಈಸಲದ ಗ್ರಾಮ ಪಂಚಾಯತಿಯ ಅದ್ಯಕ್ಷ ಸ್ಥಾನಕ್ಕೆ ನಂಜೇಗೌಡರು ಸ್ಪರ್ದಿಸುವವರಿದ್ದರು.ಮನೆಗೆ ತಂದು ಕದ್ದುಮುಚ್ಚಿ ಕುಡಿಯಲು ಸಾದ್ಯವಿರಲಿಲ್ಲ.ಅವರ ವಂಶದಲ್ಲಿ ಯಾರು ಸಹ ಕುಡಿಯುತಿರಲಿಲ್ಲ.(ಎಲ್ಲೋ ಕೆಲವರು ಮಾತ್ರ ಕದ್ದು ಮುಚ್ಚಿ ಕುಡಿಯುತ್ತಿದರಷ್ಟೇ).ಈ ಕಾರಣದಿಂದಾಗಿ ಗೌಡರು ಗೌಪ್ಯತೆ ಕಾಪಾಡುವ ಅಗತ್ಯವಿತ್ತು. ನಂಜೇಗೌಡರು ಮತ್ತು ಮಂಜ ಪೇಟೆಯನ್ನು ತಲುಪುವಷ್ಟರಲ್ಲಿ ಮಳೆ ಸಂಪೂರ್ಣ ಕಡಿಮೆಯಾಯಿತು.ಸಂಪೂರ್ಣವಾಗಿ ಕತ್ತಲಾವರಿಸಿತ್ತು.ಮಂಜ ರಾತ್ರಿಯ ಪೇಟೆಯನ್ನು ಕಂಡಿರಲಿಲ್ಲ.ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಬೀದಿಗಳನ್ನು ನೋಡಿ ದಂಗಾಗಿ ಹೋದ.ನಂಜೇಗೌಡರು ಕಾಕನ ಕ್ಯಾಂಟಿನ್ ಬದಿಗೆ ಬೈಕನ್ನು ನಿಲ್ಲಿಸಿ,ಬೈಟು ಕಾಫಿಗೆ ಹೇಳಿ,ಸಿಗರೇಟು ಹಚ್ಚಿಕೊಂಡರು.ಮಂಜ ಅಲ್ಲೇ ನಿಂತು ಕಾಕನ ಕ್ಯಾಂಟಿನಿನ ಟೇಬಲ್ಲಿನ ಮೇಲೆ ಜೋಡಿಸಿದ ಗಾಜಿನ ಬಾಟಲಿಗಳಲ್ಲಿನ ಬನ್ನು,ಬ್ರೆಡ್ಡು,ಬತ್ತಾಸುಗಳನ್ನು ತದೇಕಚಿತ್ತದಿಂದ ನೋಡತೊಡಗಿದ್ದ.ಅಷ್ಟರಲ್ಲಿ ಕಾಫಿ ಮಂಜನ ಕೈಗೆ ಬಂತು.ನಂಜೇಗೌಡರು ಮಂಜನಿಗೆ ಬನ್ನನ್ನು ಕೊಟ್ಟು,ಅಲ್ಲಿ ಯಾರೋ ಪರಿಚಯದವರೊಡನೆ ಮಾತನಾಡುತ್ತಾ ನಿಂತರು.

ಕಥೆ:ಪೇಟೆ-೧

ಮಂಜ ಅಂದು ಬಾರಿ ಸಂಭ್ರಮದಿಂದಿದ್ದ.ಆ ದಿನ ಸಂಜೆ ಅವನು ನಂಜೇಗೌಡರೊಡನೆ ಪೇಟೆಗೆ ಹೋಗುವನಿದ್ದ.ಮಂಜನ ಅಲ್ಲಿಯವರೆಗಿನ ದಿನಚರಿ ಬೆಟ್ಟದೂರಿನ ಸುತ್ತಲೇ ಸುತ್ತುತಿತ್ತು.ಹೆಚ್ಚೆಂದರೆ ಮಂಜನ ಹಳ್ಳಿಗಿಂತ ದೊಡ್ಡದು ಎನ್ನಬಹುದಾದ ಪಕ್ಕದ ಹಳ್ಳಿ ಗುಡ್ಡದೂರಿಗೆ ಹೋಗಿರಬಹುದೇನೋ.ಆದರೆ ಇಂದು ಮಂಜ ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ಅವನು ಪ್ರಾರ್ಥಿಸಿದ ಸಕಲದೇವರ ಅನುಗ್ರಹವೆಂಬಂತೆ ಪೇಟೆಗೆ ಹೋಗುವ ಸುಯೋಗ ಒದಗಿತ್ತು. ಆ ದಿನ ಬೆಳಿಗ್ಗೆ ನಂಜೇಗೌಡರು ಮಂಜನ ತಂದೆ ಸಿದ್ದನ ಬಳಿ 'ಏ ಸಿದ್ದ ಇವತ್ತು ಸಾಯಂಕಾಲಕ್ಕೆ ಮೋಟರಿಗೆ ಡೀಸೆಲ್ ತರಕೋಗ್ಬೇಕು.ಬೈಕಲಿ ಕ್ಯಾನ್ ಇಡಕಂಡ್ ಬರಕಾಗಲ್ಲ,ಮಂಜ್ ನ ಕಳ್ಸು'ಎಂದು ಹೇಳಿದರು.ಈ ಸುದ್ದಿ ಕೇಳಿದಾಗಿನಿಂದ ಮಂಜ ನಿಂತಲ್ಲಿ ನಿಲ್ಲದವನಾಗಿದ್ದ.ಶಾಲೆಯ ಸಮವಸ್ತ್ರವನ್ನು ತೊಟ್ಟು,ತಲೆಗೊಂದು ಯಾರೋ ಕೊಟ್ಟ 'ಪಲ್ಸ್ ಪೋಲಿಯೋ ಭಾನುವಾರ'ಎಂದು ಬರೆದ ಕ್ಯಾಪನ್ನು ಹಾಕಿದ್ದ.ಅವನ ಬಳಿ ಇದ್ದ ಬಟ್ಟೆಗಳಲ್ಲಿ ಶಾಲೆಯ ಸಮವಸ್ತ್ರವೊಂದೇ ತಕ್ಕ ಮಟ್ಟಿಗೆ ಬಣ್ಣ ಮತ್ತು ಶುದ್ದತೆಯ ದೃಷ್ಟಿಯಿಂದ ಚೆನ್ನಾಗಿದದ್ದು.ಎಣ್ಣೆ ಹಾಕಿ ನೀಟಾಗಿ ಬಾಚಿದ ತಲೆ ಕಾಣಲಿ ಎಂದು ಆಗಾಗ ಕ್ಯಾಪನ್ನು ತೆಗೆದು ಕೈಯಲ್ಲಿ ಸವರಿಕೊಳ್ಳುತ್ತಿದ್ದ.ನಂಜೇಗೌಡರೊಡನೆ ಮಂಜ ಬೈಕಿನಲ್ಲಿ ಹೊರಟಾಗ ಆಗಿನ್ನೂ ಕತ್ತಲಾಗುತ್ತಿತ್ತು.ಮೋಡ ಮುಸುಕಿದ್ದರಿಂದ ಸ್ಪಲ್ಪ ಮುಂಚೆಯೇ ಕತ್ತಲಾದಂತೇ ತೋರುತಿತ್ತು.ಬೆಟ್ಟದೂರದಿಂದ ಹೊರಟ್ಟರೆ ಚಿಕ್ಕಮಗಳೂರು ಪೇಟೆ ತಲುಪುವವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಕಾಫಿತೋಟ ಹಲವಾರು ಮೈಲಿಗಳವರೆಗೂ ವ್ಯಾಪಿಸಿದೆ.ನಂಜೇಗೌಡರು ಮಳೆ ಬರುವ ಮೊದಲು ಪೇಟೆಯನ್ನು ಸೇರಬೇಕೆಂಬ ತರಾತುರಿಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾರೆ.ನಂಜೇಗೌಡರ ಬೈಕಿನ ಕರ್ಕಶ ಧ್ವನಿ ಮೌನವಾಗಿದ್ದ ಪರಿಸರವನ್ನು ಪ್ರವೇಶಿಸುತ್ತಿದಂತೆ ವಿವಿಧ ಬಗ್ಗೆಯ ಪಕ್ಷಿಗಳು ಹಾರಿಹೋದವು.ಅಕ್ಷಯ ಕಾನನದ ಯಾವುದೋ ಮೂಲೆಯಲ್ಲಿ ಕಳ್ಳಭಟ್ಟಿ ಬೇಯಿಸುತ್ತಿದ್ದ ಕೆಲವರು ಕೆಲಕಾಲ ಗಾಬರಿಗೊಂಡರು.ಬೈಕಿನ ಕರ್ಕಶಧ್ವನಿ ಅವರ ಕೇಳುವಿಕೆಯ ವ್ಯಾಪ್ತಿಯನ್ನೂ ದಾಟಿ ಮುಂದೆ ಹೋದಾಗ ನಿರಾಳರಾದರು.ನಂಜೇಗೌಡರಿಗೆ ಇದ್ದು ಯಾವುದರ ಪರಿವೇ ಇರಲಿಲ್ಲ.ಪೇಟೆಯಿಂದ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಯೋಚಿಸುತ್ತಾ,ಅದೇ ಗುಂಗಿನಲ್ಲಿ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದರು.ಆದರೆ ಅವರ ಬೈಕು ಮಾತ್ರ ತನ್ನ ಕರ್ಕಶ ಮಾರ್ದನಿಯಿಂದ ಸುತ್ತಲ್ಲಾ ಪರಿಸರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿ,ತಾನು ಹೋದಲೆಲ್ಲಾ ಪರಿಸರದ ಗಮನವನ್ನು ಸೆಳೆಯುತ್ತಿತ್ತು.ರಸ್ತೆಬದ್ದಿಯ ತೋಟದಲ್ಲಿ ಹಲಸಿನಹಣ್ಣು ಕದಿಯಲು ಬಂದಿದ್ದ ಹಳ್ಳಿಯ ಹುಡುಗರು ಬೈಕಿನ ಆಕ್ರಂದನವನ್ನು ಕೇಳಿ,ತೋಟದ ಮಾಲಿಕರು ಬಂದರೆಂದು ಹಣ್ಣನ್ನು ಅಲ್ಲೆ ಎಸೆದು ಪರಾರಿಯಾದರು.ಚೋರಕ್ಕಿಗೆ ಗುರಿಯಿಟ್ಟು ಅಣಿಯಾಗುತ್ತಿದ್ದ ಆ ತೋಟದ ಹುಡುಗ ಚಾಟರಿಬಿಲ್ಲು ಬೀಸುವ ಮೊದಲೇ ಬೈಕಿನ ಆರ್ಭಟಕ್ಕೆ ಚೋರಕ್ಕಿ ಹಾರಿ ಹೋಯಿತು.-ಹೀಗೆ ಸುತ್ತಲಿನ ಪ್ರಕೃತಿಯ ತಪ್ಪಸಿಗೆ ಭಂಗ ತರುತ್ತ ಬೈಕು ಮುಂದುವರೆಯಿತು. ಅಷ್ಟರಲ್ಲಿ ಸಣ್ಣಗೆ ಮಳೆ ಪ್ರಾರಂಭವಾಯಿತು.ಸಣ್ಣಗೆ ಪ್ರಾರಂಭವಾದ ಮಳೆ ಬರಬರುತ್ತಾ ರಭಸವಾಗಿ ಸುರಿಯಲಾರಂಬಿಸಿತ್ತು.ನಂಜೇಗೌಡರು ಮಳೆಗೆ ಜರ್ಕೀನ್ ಹಾಕಿಕೊಂಡಿದರು.ಆದರೆ ಮಂಜ ನೆನೆದು ತೊಪ್ಪೆಯಾಗಿ ಹೋಗಿದ್ದ.ಮಂಜನ ಕ್ಯಾಪ್ ಹಾಕಿದ್ದ ತಲೆಯಿಂದ ಎಣ್ಣೆಮಿಶ್ರಿತ ಮಳೆಹನಿಗಳು ಮುತ್ತಿನ ಮಣಿಗಳಂತೆ ಮುಖದ ಮೇಲೆ ಜಾರುತ್ತಿದ್ದವು.ಆದರೆ ಮಂಜನಿಗೆ ಈ ಯಾವುದರ ಪರಿವೆಯೂ ಇರಲಿಲ್ಲ.ಅವನು ಪೇಟೆಯ ವೈಭವಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದ.ಪೇಟೆಯ ಬೀದಿ ಬದಿಯ ಬೇಕರಿಗಳಲ್ಲಿ ಬಣ್ಣದ,ರುಚಿಯಾದ ತಿಂಡಿಗಳು.ಸದಾಕಾಲ ಬಿಡುವಿಲ್ಲದೇ ಚಲಿಸುವ ವಾಹನಗಳು,ಬಣ್ಣಬಣ್ಣದ ಉಡುಪು ತೊಟ್ಟಜನಗಳು-ಇದೆಲ್ಲದರ ಬಗ್ಗೆ ತಮ್ಮೂರಿನ ಜನಗಳ ಬಳಿ ಕೇಳಿ ಅಚ್ಚರಿ ಪಟ್ಟಿದ.ಅದಕ್ಕಿಂತಲೂ ಮುಖ್ಯವಾಗಿ,ಬೆಟ್ಟದೂರಿನ ಯಾವುದೋ ಮೂಲೆಯಲ್ಲಿ ಇದ್ದ ಮಂಜನಿಗೆ ಕಾಡಿನ ಆ ಮೌನ,ಏಕಾಂತ,ಬೇಸರ ತರಿಸುತ್ತಿತ್ತು.ಅದಲ್ಲದೇ ತನ್ನ ಮೆಚ್ಚಿನ ಮೇಷ್ಟರು ಮನೆಯಿರುವುದು ಇದೇ ಪೇಟೆಯಲ್ಲೆ.ಬೆಟ್ಟದೂರಿನ ಮುರುಕಲುಶಾಲೆಯಿಂದ ವರ್ಗಾವಣೆಯಾದ ಮೇಲೆ ಮಂಜನಿಗೆ ಮೇಷ್ಟ್ರನ್ನು ನೋಡಲಾಗಿರಲಿಲ್ಲ.ಈಗ ಎಲ್ಲಾದರೂ ಕಂಡರೂ ಕಾಣಬಹುದೆಂಬ ಸಣ್ಣ ನಿರೀಕ್ಷೆಯು ಮಂಜನ ಮನದ ಮೂಲೆಯಲ್ಲಿತ್ತು.ಈ ಎಲ್ಲಾ ಸಂಭ್ರಮಗಳಿಂದಾಗಿ ಎಂಥಹ ಬಿರುಮಳೆಯು ಮಂಜನ ಗಮನಕ್ಕೆ ಬಂದಿರಲಿಲ್ಲ.

ಶನಿವಾರ, ಮಾರ್ಚ್ 10, 2012

ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಭಾನುವಾರ, ಜನವರಿ 8, 2012

ಆಶಯ

ಮತ್ತೆ ಬಂದಿದೆ ಹೊಸ ವರುಷ. ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು. ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು ಮತ್ತೆ ಬಂದಿದೆ ಹೊಸ ವರುಷ. ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆಯ ಜಗಕ್ಕೆ ಹರಡಲಿ. ನಾಳೆ ಜೀವನಪ್ರೀತಿಯೇ ಮಳೆಯಾಗಿ ಸುರಿಯಲಿ. ಇಳೆಯಲ್ಲಿ ಜೀವಕಳೆ ತುಂಬಿ ತುಳುಕಲಿ. ನಾಳೆ ಎಂಬ ನಾಳೆಯು ಬೇಗ ಬರಲಿ. ಹೆಗಲೇರಿ ಕುಳಿತ ಕನಸುಗಳ ನಿರಾಸೆಗೊಳಿಸದಿರಲಿ. ಮತ್ತದೇ ಏಕತಾನತೆ ಬದುಕ ಆವರಿಸದಿರಲಿ. ಮಂಕು ಕವಿದ ಗುಡಿಸಲಿಗೆ ಬೆಳಕ ತರಲಿ. ಬಂಗಲೆಯ ಗೋಡೆಗಳ ನಡುವೆ ಬದುಕು ಕಳೆದುಹೋಗದಿರಲಿ. ನಾಳೆ ಬೇಗ ಬರಲಿ. ಹೊಸತು ಬೆಳಕ ತರಲಿ

ಆಶಯ

ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಭಾನುವಾರ, ಅಕ್ಟೋಬರ್ 30, 2011

ಮಲೆನಾಡ ಹುಡುಗಿಯರು

ಮಲೆನಾಡಿನ ಹುಡುಗಿಯರು,
ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು,
ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ,ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು,

ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ ಗದ್ದೆಗಿಳಿದು ಕಳೆಯ ಕೀಳುವವರು,
ಕೈಯಲ್ಲಿ ಪುಸ್ತಕವ ಹಿಡಿದು ಕಣದಿ ಹರಡಿದ ಕಾಫಿ ಬೇಳೆಯ ಮೇಲೆ ಕಾಲಾಡಿಸುತ್ತಾ,ಪರೀಕ್ಷೆಗೆ ಓದಿಕೊಳ್ಳುವವರು,

ಇವರು ಗಂಭೀರವದನೆಯರು,ಚೆಲುಚೆಲುಚೆಲುವಿಯರು,ಗಯ್ಯಾಳಿ ಮಾಯಾಂಗನೆಯರು,

ಕೋಮಲೆಯರು,ಸಣ್ಣಮಾತಿಗೆಲ್ಲಾ ಕಣ್ಣ, ನೀರಕೊಳವಾಗಿಸುವವರು
ನಾಚುತ್ತಾತಲೆತಗಿಸಿ ಓದಲು ಬರುವ,ಇವರ ಕೆಣಕಿದರೇ ಆಗುವರು ಕಿರಗೂರಿನ ಗಯ್ಯಾಳಿಗಳು

ಮಂಗಳವಾರ, ಜೂನ್ 14, 2011

ಪ್ರಾರ್ಥನೆ

ದೋ ಎಂದು ಸುರಿದರೇ ಹಾಳು ಮಳೆ ಎನ್ನುವ

ಮೋಡಮೂಡಿ ಸುರಿಯದಿರೇ ಎಲ್ಲಿ ಹೋಯಿತು ಹಾಳುಮಳೆ ಎಂದು ಬೈಯುವ

ಮಂದಿಯ ಮೇಲೆ ಸಿಟ್ಟಾಗಬೇಡಯ್ಯ ವರುಣ

ಶತಶತಮಾನಗಳಿಂದ ಕೃಪೆತೋರಿ ಸುರಿಯುತ್ತಿರುವೇ ನೀನು

ನಿನ್ನೆ ಮೊನ್ನೆ ಬಂದ ಹುಲುಮಾನವರು ನಾವು

ನಿನಗೆ ತಿಳಿಯದೇ ಮಳೆಯ ಲೆಕ್ಕ?

ನಮ್ಮ ಪ್ರಾರ್ಥನೆ ಇಷ್ಟೆ.

ನೋಡಿ ಬಾರಯ್ಯ ವರುಣ
ಜೀವದ ಮೇಲಿರಲಿ ಕರುಣ

ಶುಕ್ರವಾರ, ಮೇ 13, 2011

ಮಂಗಳವಾರ, ಏಪ್ರಿಲ್ 12, 2011

ಕವಿಯಾಗಬೇಕೆಂದರೆ

'ಕವಿಯಾಗಬೇಕಾದರೆ ಕಿವಿಯಾಗಬೇಕು'ಎಂದು ಪ್ರಾರಂಭವಾಗುವ ಕವಿತೆಯೊಂದನ್ನು ಸ್ಮರಣಸಂಚಿಕೆಯೊಂದರಲ್ಲಿ ಓದಿದೆ.ಮೊದಲ ಬಾರಿಗೆ ಅಷ್ಟಾಗಿ ಅರ್ಥವಾಗಲಿಲ್ಲ ಮತ್ತೆ ಮತ್ತೆ ಓದಿದ್ದೆ.ಕವಿತೆ ಕಾಡತೊಡಗಿತ್ತು.ಕವಿಯಾಗಬೇಕೆಂದರೆ ಕಿವಿಯಾಗಬೇಕು ಎಂದರೇನು? ಸುತ್ತಲಿನ ಜಗತ್ತನ್ನು ಗಮನಿಸುತಿರಬೇಕು ಎಂದಿರಬಹುದೇ?ಅಥವಾ ಬರೆದ ಬರಹ ಅಥವಾ ಕವಿತೆಯೊಂದನ್ನು ಕೇಳಲು ಕೇಳುಗರಿರಬೇಕೆಂಬುದು ಇದರ ಅರ್ಥವೆ? ನಮ್ಮ ನಾಡಿನ ಕವಿಗಳ ಜೀವನ ಚರಿತ್ರೆಗಳನ್ನು ಓದಿದಾಗ ತಿಳಿಯುದೇನೆಂದರೆ ಅವರೆಲ್ಲಾ ಹೆಚ್ಚುಹೆಚ್ಚು ಪುಸ್ತಕಗಳನ್ನು ಓದುತ್ತಿದರು.ಮತ್ತು ಅವರ ಗೀಚಿದನೆಲ್ಲ ಕೇಳಿ ಪ್ರೋತ್ಸಾಹಿಸುವವರು ಇದ್ದರು.ತಾ.ರಾ.ಸು.ರವರು ಪುಸ್ತಕ ಓದಲೆಂದೇ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದರಂತೆ.ತಾ.ರಾ.ಸು.ರವರ ಸಂಬಂದಿಕರಾದ ವೆಂಕಣಯ್ಯನವರು ತಾ.ರಾ.ಸು.ರವರ ಓದುವ ಹವ್ಯಾಸವನ್ನು ಗುರುತಿಸಿ ಬೇರೆ ಯಾರಿಗೂ ಪ್ರವೇಶವಿರದ ತಮ್ಮ ಮನೆಯ ಗಂಥ್ರಾಲಯದ ಪುಸ್ತಕವನ್ನು ಓದಲು ಹೇಳಿದರು. ಹಾಗೇಯೇ ಕುವೆಂಪುರವರು ಓದಲು ಮೈಸೂರಿಗೆ ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲೇ ಕಳೆಯುತ್ತಿದ್ದರು.ಕುವೆಂಪುರವರು ಓದಬೇಕೆಂದುಕೊಂಡ ಪುಸ್ತಕ ಬೇರೆಯಾರದರೂ ಓದುತ್ತಿದರೆ,ಅವರು ಓದುವವರೆಗೆ ಕಾದು ನಂತರ ಓದುತ್ತಿದರು.ಅದೇ ಗ್ರಂಥಾಲಯದಲ್ಲಿ ಓದಿದ್ದ ವಿವೇಕಾನಂದ,ರಾಮಕಷ್ಣಪರಮಹಂಸ,ಶಾರದಮಾತೆಯವರ ಜೀವನ ಚರಿತ್ರೆ,ಕುವೆಂಪುರವರ ಬದುಕನ್ನೇ ಬದಲಾಯಿಸಿತು.ದೇಶ-ವಿದೇಶದ ಪ್ರಖ್ಯಾತ ಕವಿಗಳ ಕೃತಿಗಳ ಓದು,ಬೇರೆ ದೇಶದ ಜನಜೀವನವನ್ನು ಅರಿಯಲು ಸಹಾಯಕವಾಯಿತು. ಸಾಹಿತ್ಯ ಎಂದರೆ ನಮ್ಮ ಅನುಭವ ಅಥವಾ ಭಾವನೆಯನ್ನು ಉಚಿತ ರೀತಿಯಲ್ಲಿ ದಾಖಲಿಸುವುದು.ಪುಸ್ತಕಗಳನ್ನು ಓದುವ ಮೂಲಕ,ಸುತ್ತಲಿನ ವಿದ್ಯಮಾನಗಳನ್ನು ಗಮನಿಸುವುದರಿಂದ ನಮ್ಮ ಭಾವಕೋಶ ಬೆಳೆಯುತ್ತದೆ.ಆ ಮೂಲಕ ಉತ್ತಮ ಸಾಹಿತ್ಯಸೃಷ್ಟಿ ಸಾಧ್ಯ.ಇನ್ನೂ ಕಥೆ ಕವನಗಳನ್ನು ಕೇಳುವ,ಪ್ರೋತ್ಸಾಹಿಸುವವರು ಈಗ ಕಡಿಮೆಯೆಂದೇ ಹೇಳಬಹುದು.ಕೇಳುಗರಲ್ಲದವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ.ಯಾಕೆಂದರೇ ಆನಂತರ ನಮ್ಮನ್ನು ನೋಡುವ ಅವರ ದೃಷ್ಟಿಯೇ ಬದಲಾಗಬಹುದು.ಕೇಳುಗರಿಲ್ಲದ ಕವನ ಮಂಕಾಗುತ್ತದೆ.ಆಗಷ್ಟೇ ಅರಳುತ್ತಿರುವ ಕವಿ ತೆರೆಮರೆಗೆ ಸರಿಯುತ್ತಾನೆ. ಓದುವ ಹವ್ಯಾಸವಿದ್ದು,ಬರೆದದ್ದನೆಲ್ಲಾ ಕೇಳುವ ಕೇಳುಗರಿದ್ದರೆ ಕವಿಗಳಾಗುವುದರಲ್ಲಿ ಸಂದೇಹವಿಲ್ಲ.

ಗುರುವಾರ, ಏಪ್ರಿಲ್ 7, 2011

ಕರೆದಿದೇ,ಕರೆದಿದೇ ಕಾಡುವ ಕಾಡು. ಅಡವಿಯ ಒಡಲದು ಅಚ್ಚರಿ ಗೂಡು. ಅಡಗಿಹ ನಿಗೂಢವ ನೀ ಹುಡುಕಾಡು. ನಡುವಲೀ ಹರಿವ ತೊರೆಯನ್ನು ನೋಡು. ತೊರೆಗಳು ಹಿಡಿದಿವೇ ಕಡಲಿನ ಜಾಡು. ದೂರದಿ ಕೇಳಿದೇ ಹಕ್ಕಿಯ ಹಾಡು. ಬೆಟ್ಟದ ತುದಿಯಲ್ಲಿ ನೀ ನಿಂತು ನೋಡು. ಹಕ್ಕಿಯ ಜೊತೆಯಲ್ಲಿ ಮನಬಿಚ್ಚಿ ಹಾಡು.

ಭಾನುವಾರ, ಏಪ್ರಿಲ್ 3, 2011

ಮಲೆನಾಡಿನ ಬೆಳದಿಂಗಳ ರಾತ್ರಿ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ.ರಾತ್ರಿ ಬೇಟೆ ಹುಡುಕುವ ಬಾವಲಿಗಳ ಹಿಂಡು ತಿಂಗಳ ಬೆಳಕಿನಲ್ಲಿ ಗೋಚರಿಸುತಿವೆ.ಈ ವಿದ್ಯಮಾನಗಳು ನಡೆಯುವ ವೇಳೆಯಲ್ಲೇ ಕೆಳಗೆ,ತುಂಬ ಕೆಳಗೆ ಬೆಂಕಿಯ ಜ್ವಾಲೆ ದಗದಗಿಸಿ ಉರಿಯುತ್ತಿದೆ.ಆ ದಗದಗಿಸುವ ಬೆಂಕಿಯ ಬೆಳಕು ಸುತ್ತಲೂ ಕುಳಿತು ಚಳಿ ಕಾಯಿಸುತ್ತಿರುವ ಮಂದಾಯ ಕಣ್ಣುಗಳಲ್ಲಿ ಪ್ರತಿಪಲಿಸುತ್ತಿದೆ.ಅಲ್ಲೆ ಬೆಂಕಿಯ ಒಂದು ಬದ್ದಿಯಲ್ಲಿ ನಾಯಿಯೊಂದು ಮುದುಡಿ ಮಲಗಿದೆ.ಕಾಡುಗತ್ತಲೆಯ ಗರ್ಭದೊಳಗಿಂದ ಜೀರುಂಡೆಗಳ ಜಿರ್ ಜಿರ್ ಸದ್ದು ಸನ್ನಿವೇಶಕ್ಕೆ ಹಿಮ್ಮೇಳವನ್ನು ಒದಗಿಸಿದೆ.ಮಿಂಚುಹುಳುಗಳು ಅಲ್ಲೊಂದು ಇಲ್ಲೊಂದು ಬೆಳಗಿ,ಮಸಿಗತ್ತಲೆಯ ನಡುವೆ ಬೆಳಕಿನ ಕಿಡಿಯನ್ನು ಸೋಕಿಸಿ ಬೆಳಕಿನ ಇರುವಿಕೆಯನ್ನು ಸಾರಿಸಾರಿ ಹೇಳುತಿದೆ.ಕಾನನದ ಯಾವುದೋ ಮೂಲೆಯಲ್ಲಿ ನರಿಯೊಂದು ಊಳಿಡುತ್ತಿದೆ.

ಮಂಗಟ್ಟೆಯ ದೆಸೆಯಿಂದ!

ಮಂಗಟ್ಟೆಹಕ್ಕಿ-ವಿಶೇಷವಾದ ಕೊಕ್ಕಿನಿಂದ,ಕೇಕೆಹಾಕಿ ಕೂಗುವ ದನಿಯಿಂದ,ಅದರ ಅದ್ಬುತವಾದ ಜೀವನಶೈಲಿಯಿಂದ ಕುತೂಹಲಕ್ಕೆ ಕಾರಣವಾದ ಹಕ್ಕಿ.ಮಂಗಟ್ಟೆಹಕ್ಕಿಗಳು ಇರುವಲ್ಲಿ ಜೀವವೈವಿದ್ಯ ಸಮೃದ್ದವಾಗಿರುತ್ತವಂತೆ.ಇವುಗಳು ಸಾಮಾನ್ಯವಾಗಿ ಜೋಡಿ,ಅಥವಾ ಗುಂಪುಗಳಲ್ಲಿ ಕಾಣಸಿಗುತ್ತವೆ.ಬೆಳಗಿನ ಜಾವ ನಮ್ಮ ಮನೆಯ ಪಕ್ಕದ ಗೋಣಿಮರದ ಮೇಲೆ ಕುಳಿತು ಒಂದು ಮಂಗಟ್ಟೆಹಕ್ಕಿ ಕೇಕೆಹಾಕತೊಡಗಿದರೆ,ಸ್ವಲ್ಪ ದೂರದಲ್ಲಿ ಮತ್ತೊಂದು ಮಂಗಟ್ಟೆ ಹಕ್ಕಿ,ಕೇಕೆ ಹಾಕಲು ಪ್ರಾರಂಭಿಸುತ್ತದೆ.ಒಂದರ ನಂತರ ಇನ್ನೊಂದರಂತೆ ಸರದಿಯಲ್ಲಿ ಕೇಕೆ ಹಾಕತೊಡಗುತ್ತವೆ.ಇವುಗಳು ಏನೂ ಸಂಭಾಷಣೆ ನಡೆಸುತ್ತಿರುತ್ತವೋ ಏನೋ.ಮಂಗಟ್ಟೆಯ ದನಿಯಂತೂ ತುಂಬ ದೂರದವರೆಗೂ ಕೇಳಿಸುತ್ತದೆ.ಇವುಗಳ ಸಂಭಾಷಣೆಗೆ ಹಿಮ್ಮೇಳವನ್ನು ನೀಡಲೆನ್ನೂವಂತೆ,ಕಾಡುಕೋಳಿಗಳು ಸಹ ಕೂಗತೊಡಗುತ್ತವೆ.ಮನೆಯ ಹಿಂದಿನ ಗೊಬ್ಬರದ ಗುಂಡಿಯ ಬಳಿ ಕೆದಕುತ್ತಿದೆ ಸಾಕುಕೋಳಿಗಳು ಗಾಬರಿಗೊಂಡು ಅರಚತೊಡಗುತ್ತದೆ.ನೋಡನೋಡುತ್ತಿದಂತೇ ಪರಿಸರ ಗಾಬರಿ-ಗದ್ದಲಗಳಿಂದ ತುಂಬಿ ಹೋಗುತ್ತವೆ.

ಶುಕ್ರವಾರ, ಮಾರ್ಚ್ 18, 2011

ಹೇಗೋ ಏನೋ ಇದೇ ನಾನು

ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ. ವಶವ ಮಾಡಿಕೊಂಡೆಯಲ್ಲ ಕರುಣೆ ತೊರದೆ. ನನ್ನ ಬಾಳ ಒಲುಮೆ ನೀನು, ನನ್ನ ಭಾವ ಚಿಲುಮೆ ನೀನು. ಹೇಳು ನೀನು ಯಾರು ನಾನು ತಿಳಿಯದಾಗಿದೇ. ಹೂವ ತುಟಿಯ ಜೇನಿನಂಥೆ. ಮುದ್ದೂಮಗುವ ನಗುವಿನಂತೆ ಬಂದೇ ಬಾಳಿಗೆ, ಹೇಗೊ ಏನೋ ಇದೇ ನಾನು ನನ್ನ ಪಾಡಿಗೆ. ಕಡೆಗೆ ಕಾವ್ಯಸ್ಪೂರ್ತಿಯಾದೆ ಕಾವ್ಯಕನ್ನಿಕೆ.

ಕವಿಯು-ಚೆಲುವು

ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೋ ಎನುತ್ತ ಹೆಸರ ಹೇಳದೇನೇ ಹೊರಟುಹೋದನು. ಕವಿತೆಯನ್ನ ತೊದಲಿ ಓದಿ, ಮತ್ತೆಮತ್ತೆ ಹಾಡಿಪಾಡಿ, ಅರ್ಥ ಅರಿಯೇ ಕವಿತೆ ಕಾಡಿ,ಎಂಥ ಅದ್ಬುತ!. ಹೊರಟುಹೋದ ಕವಿಯು ಬಂದ. ಹೃದಯದೊಳಗೆ ಬಂದು ನಿಂತ. ಸುಮದೊಳೀಗ ಎಷ್ಟು ಬಣ್ಣ. ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.

ಗುರುವಾರ, ಫೆಬ್ರವರಿ 24, 2011

ಕವಿಯು-ಚೆಲುವು

ವನಸಿರಿಯ ಚೆಲುವ ಕಂಡು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು, ಕವಿಯು ಬರೆದ ಕವಿತೆಯ. ಮಧುವ ಹೀರುವ ದುಃಬಿಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೇ ಎನುತ್ತಾ ಹೆಸರ ಹೇಳದೇನೇ ಹೊರಟು ಹೋದನು. ಕವಿತೆಯನ್ನು ತೊದಲಿ ಓದಿ, ಮತ್ತೆಮತ್ತೆ,ಹಾಡಿ-ಪಾಡಿ, ಅರ್ಥಕಾಡೇ,ಎಂಥ ಅದ್ಬುತ!, ಹೊರಟುಹೋದ ಕವಿಯು ಬಂದ, ಹೃದಯದೊಳಗೆ ಬಂದು ನಿಂದ. ಸುಮದೊಳೀಗ ಎಷ್ಟು ಬಣ್ಣ, ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಭಾಗ್ಯವೆಂದರೇ ನಿನ್ನದೇ ಬಿಡು

ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ತೋಟದಿಂದ ತೋಟಕ್ಕೆ, ಮರದಿಂದ ಮರಕ್ಕೆ, ಕೊಂಬೆಯಿಂದ ಕೊಂಬೆಗೆ ಹಾರಿ, ಬಗೆಬಗೆಯ ಹೂಮಕರಂಧವ ಹೀರಿ, ಅಡೆತಡೆಯಿಲ್ಲದೇ ಏರಿಳಿಯುವ; ಭಾಗ್ಯವೆಂದರೇ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೇ ಇಲ್ಲದೇ, ಜಾತಿ ಧರ್ಮದ ಗೊಡವೆಯೇ ಇಲ್ಲದ ಭಾಗ್ಯವೆಂದರೇ ನಿನ್ನದೆ ಬಿಡು.

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ!

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ,ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು,ಹಿಂದೆ ನಡೆದ ಹಗರಣಗಳತ್ತ ಬೊಟ್ಟು ಮಾಡಿ,ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಹೆಗ್ಗಣವಲ್ಲ ಎಂದು ನಂಬಿಸಲು ಹೊರಟಿದ್ದಾರೆ.ಇವರೇನ್ನೂ ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?.ಕಣ್ಣಮುಂದೆಯೇ ಅನ್ಯಾಯ ತಂಡಾವವಾಡುತ್ತಿದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಾಮಾನ್ಯನಿದ್ದರೆ, ನಾಡಿನ ರಕ್ಷಣೆಗೆ ಮುಂದಾಗುವ ಪ್ರಾಮಾಣಿಕ ನಾಯಕರ ಕೊರತೆ ಮತ್ತೊಂದೆಡೆ.ಈ ಸಂದರ್ಭದಲ್ಲಿ ಬುದ್ದಿಜೀವಿಗಳು,ಕನ್ನಡ ಹೋರಾಟಗಾರರು,ಮೌನವಹಿಸಿರುವುದು ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳುವಂತೇ ಮಾಡಿದೆ.ಜನರು ತಮ್ಮ ಪ್ರಜಾಶಕ್ತಿಯನ್ನು ಅರಿತು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವ ಅಗತ್ಯವಿದೆ.

ಶುಕ್ರವಾರ, ಜನವರಿ 28, 2011

ನವಚೈತನ್ಯ ಗಾನ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ,
ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ,
ಶ್ರಮಜೀವಿಗೂ ಕೂಡ ಬಂತು ಆಕಳಿಕೆ,
ಜಗವೆಲ್ಲ ಆಗಿಹುದು ಅಗೋಚರದ ವಶಕೆ.

ಈಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ
ಮೋಡ ಚದುರಿತು ಬಿಟ್ಟು ಬಿಗುಮಾನ.
ಧರೆಗಿಳಿಯಿತು ಹೊಸ ಹುರುಪಿನ ರವಿಕಿರಣ
ಮೈಮನದರಲಿ ಎಂಥದೋ ಸಂಚಲನ.

ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ.
ಇನ್ನೂ ನಿಂತೇ ಇಹಿರೇನು?
ಕೇಳಲಿಲ್ಲವೇ ನಿಮಗೆ ನವಚೈತನ್ಯದ ಗಾನ.

ಕವಿ

ಏಳುಬೀಳಿನ ಬದುಕ ಕಥೆಯಾಗಿ ಚಿತ್ರಿಸುವವನು.
ಕಥೆಯನ್ನೆ ಬದುಕಾಗಿಸಿಕೊಂಡವನು.
ವಾಸ್ತವವ ಕಲ್ಪಿಸಿಕೊಳ್ಳುವವನು.

ಕಲ್ಪನೆಯ ವಾಸ್ತವಿಕರಿಸುವನು.
ತನ್ನ ಭಾವಗಳ ಜಗಕ್ಕೆ ಹಂಚುವನು.
ಜಗದ ಭಾವನೆಯ ತನ್ನದೆಂದುಕೊಂಡವನು.

ಏಕಾಂತ ಮೌನದಲಿ ನಿತ್ಯ ವಿಹರಿಸುವನು.
ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.
ಅಲೆವ ಭಾವನೆಗೆ ರೂಪ ಕೊಟ್ಟವನು.

ನಿದ್ರೆಯಲ್ಲಿ ಮೈಮರೆತು ಮಲಗಿದ್ದರೇನಂತೆ,
ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.

ಭಾನುವಾರ, ಜನವರಿ 23, 2011

image

ಒಂದು ಮಧ್ಯರಾತ್ರಿ

ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು ಮಂದವಾಗಿ ಬೆಳಗುತ್ತಿದ್ದೆ.ಗಡಿಯಾರದ ಟಿಕ್ ಟಿಕ್ ಶಬ್ಧ,ನಾನಿನ್ನೂ ನಿದ್ರಿಸಿಲ್ಲ ಎಂದು ಸಾರುತ್ತಿದೆ.ಸರಿಯಾಗಿ ನಲ್ಲಿ ತಿರುಗಿಸಲ್ಲವೋ ಏನೋ,ಬಚ್ಚಲಿನ ನಲ್ಲಿಯಿಂದ ನೀರು ತೊಟ್ಟುಕುತ್ತಿರುವ ಕೇಳಿ ಬರುತ್ತಿದೆ.ನಾನು ಇನ್ನೂ ಕಾರ್ಯನಿರ್ವಹಿಸುತ್ತಿದ್ದೆನೆ ಎಂದು ಸೊಳ್ಳೆಬತ್ತಿಯು ತನ್ನ ದೂಮ ಮತ್ತು ಕೆಂಪಗಿನ ಕಿಡಿಯನ್ನು ಸಾಕ್ಷಿಯನ್ನು ದೃಷ್ಟಿಗಮ್ಯವಾಗಿಸಿದೆ.ದೂರದಲ್ಲೆಲೋ ಬೀದಿ ನಾಯಿಗಳ ಬೊಗಳುವಿಕೆ ಅಸ್ಪಷ್ಟವಾಗಿ ಕೇಳಿಸುತ್ತಿದೆ.ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ.ಬೀದಿದೀಪದ ಬೆಳಕು ವಾಹನದ ಗಾಜಿಗೇ ಬಿದ್ದು ಪ್ರತಿಫಲಿಸಿ,ಮನೆಯ ಗೋಡೆಗಳ ಮೇಲೆ ಬೆಳಕು ಬೀಳುತ್ತಿದೆ.ಕಿಟಕಿಯಿಂದ ತಣ್ಣನೆಯ ಗಾಳಿ ಬೀಸಿ ಒಂದು ಕ್ಷಣ ಮೈ ಥರಗುಟ್ಟಿತು.ಹೊದಿಕೆಯನ್ನು ಎಳೆದು ಮುದುಡಿಕೊಂಡು ಕಣ್ಣುಮುಚ್ಚಿದೆ.ನಿದ್ರೆ ಯಾವಾಗ ಆವರಿಸಿತ್ತೋ ತಿಳಿಯಲಿಲ್ಲ.ಬೆಳಿಗ್ಗೆ ಕಣ್ಣು ಬಿಟ್ಟಾಗ ರಾತ್ರಿ ಕಂಡ ದೃಶ್ಯಾವಳಿಗಳು ಕತ್ತಲೆಯೊಂದಿಗೆ ಕರಗಿಹೋದವು

ಓದಿ ನೋಡಿ

'ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರು ಸಂತಸದಿಂದಿರಬಲ್ಲ.' 'ಓದು ಮನುಷ್ಯನಾಗಿ ಮಾಡಿದರೆ,ಬರವಣಿಗೆ ಅವನನ್ನು ಪರಿಪೂರ್ಣನಾಗಿ ಮಾಡುತ್ತದೆ.' ಮೇಲಿನ ಮಹನೀಯರ ನುಡಿರತ್ನಗಳನ್ನು ಕೇಳಿ ನಿಮಗೂ ಪುಸ್ತಕವನ್ನು ಓದಬೇಕು ಎನಿಸಿರಬೇಕು.ಅಥವಾ ನೀವು ಸಹ ಪುಸ್ತಕಪ್ರೇಮಿ ಯಾಗಿರಬಹುದು.ನೀವು ಓದಿದ್ದ ಯಾವುದೋ ಪುಸ್ತಕ ತುಂಬ ಇಷ್ಟವಾಗಿರಬಹುದು.ಆ ಪುಸ್ತಕದ ಬಗ್ಗೆ ನಿಮ್ಮ ಗೆಳೆಯರಿಗೆ ಹೇಳಿ,ಓದಲು ಕೊಟ್ಟಿರಬಹುದು.ಅಥವಾ ಹೇಳಿರಬಹುದು.ಇಲ್ಲಿ ನಾನು ಓದಿ ಇಷ್ಟಪಟ್ಟು ಗೆಳೆಯರಿಗೆ ಓದಲು ಹೇಳಿದ ಪುಸ್ತಕಗಳ ಹೆಸರುಗಳನ್ನು ಕೊಟ್ಟಿದ್ದೇನೆ.ಇವುಗಳಲ್ಲಿ ನೀವು ಓದಿರುವ ಪುಸ್ತಕಗಳು ಇರಬಹುದು.ನೀವು ಓದಿದ್ದ,ಇಷ್ಟಪಟ್ಟ ಪುಸ್ತಕಗಳ ಬಗ್ಗೆ ಹಂಚಿಕೊಳ್ಳಬಹುದು. ಕುವೆಂಪು: ಕಾನೂರು ಹೆಗ್ಗಡತಿ. ಮಲೆಗಳಲ್ಲಿ ಮದುಮಗಳು. ನೆನಪಿನ ದೋಣಿಯಲ್ಲಿ. ಸ್ವಾಮಿ ವಿವೇಕಾನಂದ. ಮಲೆನಾಡಿನ ಚಿತ್ರಗಳು. ಕಥನ ಕವನಗಳು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ: ಕರ್ವಾಲೋ, ಚಿದಂಬರ ರಹಸ್ಯ. ಜುಗಾರಿ ಕ್ರಾಸ್. ಕಿರಗೂರಿನ ಗಯ್ಯಾಳಿಗಳು. ಅಬಚೂರಿನ ಪೋಸ್ಟಾಪೀಸು. ಮಾಯಾಲೋಕ. ಮಿಸ್ಸಿಂಗ್ ಲಿಂಕ್. ಪಾಕಕ್ರಾಂತಿ ಮತ್ತು ಇತರ ಕಥೆಗಳು. ವಿಮರ್ಶೆಯ ವಿಮರ್ಶೆ. ಪ್ಲೇಯಿಂಗ್ ಸಾಸರ್. ಪರಿಸರದ ಕಥೆ. ತಾ.ರಾ.ಸು: ದುರ್ಗಾಸ್ತಮಾನ. ರಕ್ತರಾತ್ರಿ. ತಿರುಗುಬಾಣ. ಕಸ್ತೂರಿಕಂಕಣ. ಚಂದವಳ್ಳಿಯ ತೋಟ. ಹಿಂತಿರುಗಿ ನೋಡಿದಾಗ. ಗಿರಿಮಲ್ಲಿಗೆ. ಮರಳುಸೇತುವೆ. ನಾಗರಹಾವು. ಕಂಬನಿಯ ಕುಯಿಲು. ಹೊಸಹಗಲು. ವಿಜಯೋತ್ಸವ. ತ.ರಾ.ಸುರವರ ಸಮಗ್ರ ಕಥೆಗಳು. ಯು.ಆರ್.ಅನಂತಮೂರ್ತಿ: ಸಂಸ್ಕಾರ. ಶಿವರಾಮ ಕಾರಂತ: ಮೂಕಜ್ಜಿಯ ಕನಸು

ಶನಿವಾರ, ಜನವರಿ 22, 2011

ಚಿತ್ರ-ಕವನ

ಒಂದು ಒಣಗಿದ್ದ ಮರ.ಅದರ ಪಕ್ಕದಲ್ಲಿ ಎತ್ತುಗಳಿಲ್ಲದ ಗಾಡಿ.ಹಿಂಬದಿಯಲ್ಲಿ ಕೆರೆ.ಅದರ ಆ ತೀರದಲ್ಲಿ ದಟ್ಟ ಕಾನನ.ಮೇಲೆ ಶುಭ್ರ ನೀಲಾಕಾಶ.ಒಣಮರದ ಸುತ್ತಲ್ಲೂ ಒಣಗಿದ್ದ ಗಿಡಗಂಟಿಗಳು:ಈ ಚಿತ್ರವನ್ನು ನೋಡಿ ರಚಿಸಿದ ಕವನ ಈ ಕೆಳಗಿನದು: ಒಣಮರಕ್ಕೆ ಆಗಿದೆ ನೀರಡಿಕೆ. ಹಿನ್ನಲೆಯಲ್ಲಿ ಇದೆ ನೀರ ಒರತೆ. ತುರ್ತಾಗಿ ಸಿಗಬೇಕಾಗಿದೆ ಮರಕ್ಕೆ ಚಲನೆ; ಅಥವಾ ಇರಲೇಬೇಕು ಅಪಾರ ಸಹನೆ. ನೀರು ಏರಿ ಬಾನ ಸೇರಿ ಮತ್ತೆ ಜಾರಿ ಭುವಿಯ ಸೇರೋವರೆಗಿನ ತಾಳ್ಮೆ. ಎತ್ತಿಲ್ಲದ ಗಾಡಿಯು ತಂದಿದೇ ಚಲನೆಯ ಚಪಲ. ಆಚೆ ತೀರದ ಹಸಿರು ಕೆಡಿಸಿದೇ ತಾಳ್ಮೆ. ಗಾಡಿ ಚಲನೆ ಕಳೆದು ಮೂಲೆ ಸೇರಿದೆ. ನಿಂತ ಮರವೂ ಚಲನೆಗಾಗಿ ಕೊರಗೆ ಕೊರಗಿದೆ. ಎತ್ತಿನಗಾಡಿಗೆ ಬರಲಿ ಜೋಡಿಎತ್ತು, ಕೊರಳಗಂಟೆಯ ಸದ್ದು ತರಲಿ ಮರುಜೀವ. ಬೇಗ ಬಾರಯ್ಯ ವರುಣ, ಇರಲಿ ಜೀವದ ಮೇಲೆ ಕರುಣ

ತೋಚಿದ್ದು-ಗೀಚಿದ್ದು

ಬರಸಿಡಿಲೇ ಬಡಿಯಲಿ ಬಿರುಮಳೆಯೇ ಸುರಿಯಲಿ. ಅಗ್ನಿದೇವ ರುದ್ರನಾಗಿ ಅಗ್ನಿವೃಷ್ಟಿ ಸುರಿಸಲಿ. ಸಪ್ತಸಾಗರವೇ ಕದಡಿ ಕೆರಳಿ, ಲೋಕವೆಲ್ಲ ಮುಳುಗಲಿ, ಜಗವೇ ಕೆರಳಿ ಏನೇ ಬರಲಿ ದಿಟ್ಟಗುರಿಯು ನಿನ್ನದಾಗಲಿ

ಪೂರ್ಣಚಂದ್ರ ಮತ್ತು ಗಂಧರ್ವನಗರಿ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬಳಿಯಿಂದ ಕೇಳಿ ಬರುತ್ತಿರುವ ಗಜಿಬಿಜಿ ಮಾತುಗಳು.ಅಬ್ಪಾ ಇದೇನು ಗಂದರ್ವಲೋಕವೇ ಧರೆಗಿಳಿದಂತಿದೆಯಲ್ಲ.ಅಗೋ! ಅಲ್ಲಿ ದೂರದ ಮಂಟಪ ಮಿಣುಕುದೀಪಗಳಿಂದ ಜಗಮಗಿಸುತ್ತಿದೆ.ಹಸಿರು,ಕೆಂಪು,ನೀಲಿ,ಹಳದಿ ಇನ್ನೂ ಹಲವಾರು ತರತರದ ಬಣ್ಣಗಳು.ಹೌದು! ಇದು ಬಣ್ಣಗಳದೇ ಲೋಕ.ಅಯ್ಯೋ ಇದೇನಾಯ್ತು?. ಇಡೀ ನಗರವೇ ಕರಗಿಹೋದಂತೆ ತೋರುತ್ತಿದೆಯಲ್ಲ.ಹೌದು ಇಲ್ಲಿ ಎಲ್ಲವೂ ಕೃತಕ.ಕ್ಷಣಿಕವೂ ಕೂಡ.ಒಂದು ಕ್ಷಣ ವಿದ್ಯುತ್ ಕೈಕೊಟ್ಟರೂ ಇಲ್ಲಿಯ ಬದುಕೇ ತಟಸ್ಥವಾದಂತೇ.ಒಂದು ನಿಮಿಷದ ಹಿಂದೆ ಕಂಡ ಸೊಬಗು ಹೀಗೆಲ್ಲಿ ಕರಗಿಹೋಯಿತು.ಅಥವಾ ಇದು ಬರೀ ಕನಸೇ? ಇರಲಾರದು.ಹೋ ಅದೋ ಆಗಸದಿ ಆ ಚಂದ್ರ ಅದೆಷ್ಟು ತೇಜೋಮಯನಾಗಿದ್ದಾನೆ.ಅರೇ ಚುಕ್ಕಿಗಳು!ಇಷ್ಟುಹೊತ್ತು ಇವೆಲ್ಲಿದವು?.ಅಥವಾ ಇದೂ ಸಹ ಕನಸೇ ಇರಲಿಕ್ಕಿಲ್ಲ.ಆದರೆ ಆ ಚಂದ್ರ ಈ ಕೃತಕ ಗಂದರ್ವನಗರಿಗಿಂತ ಸುಂದರ,ಸಹಜ.ಇಷ್ಟು ದಿನ ನಾನೇಕೆ ಈ ಸೊಬಗನ್ನು ಕಾಣಲಿಲ್ಲ?.ಆಸ್ವಾದಿಸಲಿಲ್ಲ?.ಅದೋ! ಶಶಿಯ ಬೆಳದಿಂಗಳಲ್ಲಿ ನಗರ ಅದೆಷ್ಟು ಮನೋಹರವಾಗಿ ಗೋಚರಿಸುತ್ತಿದೆ.ಅಯ್ಯೋ ಇದೆನಾಯ್ತು ವಿದ್ಯುತ್ ಬಂದೇ ಬಿಟ್ಟಿತ್ತಲ್ಲ.ಅದಕ್ಕೇನು ಅವಸರವಿತ್ತು?

ಓ ದೇವ ನೀ ಬೇಗ ಬಾ

ಮಣ್ಣಾಟವಾಡುವ ಕಂದನ ಕಂಡು
ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,
ತಿದ್ದಿ ನೆಡೆಸಲು
ಓ ದೇವ ನೀ ಬೇಗ ಬಾ

ಪ್ರಾಣ ಹಿಂಡುವ ಮಂದಿ
ರಕ್ತ ಹೀರುವ ಮಂದಿ
ಎಲ್ಲ ಮಂದಿಯ ಮನದಿ
ಮಾನವೀಯತೆಯ ಕಿಡಿಯ ನೀ ಹಚ್ಚು ಬಾ
ಓ ದೇವ ನೀ ಬೇಗ ಬಾ

ಅಂದು ಭಕ್ತಿ ಮಾರ್ಗದಿ ನಿನ್ನ
ನಾಮ ಸ್ಮರಣೆಯ ಮಾಡಿ
ಮುಕ್ತಿ ತೋರೋ ಎಂದು ಭಜಿಸುತಲಿರೇ
ಇಂದು ಜಾತಿ,ಪಕ್ಷವು ನಿನ್ನ
ನಾಮವನೇಳಿ ಸರ್ವನನ್ನು ಅಲ್ಪನಾಗಿಸುತಿಹರು.

ಹೆಸರೊಂದೆ ಸಾಕೀಗ,ಭಕ್ತಿಗಿಲ್ಲವೋ ಜಾಗ
ಎಂಬ ಹುಂಬರೆದೆಯಲ್ಲಿ
ಭಕ್ತಿಜ್ಯೋತಿಯ ಹಚ್ಚಲು
ಓ ದೇವ ನೀ ಬೇಗ ಬಾ

ನಿನ್ನಯ ಕಂದರು ನಾವೆಲ್ಲ
ಕುರುಡರಂದದ್ದಿ ನಿನ್ನ ಹುಡುಕುತಿರುವೆವಲ್ಲ.
ನೀ ಬರಲು ಪ್ರಶ್ನೆಗಳೇ ಇಲ್ಲ.
ಆಸ್ತಿಕರ ನಾಸ್ತಿಕರ ಜಗಳವದು ನಿಂತಿಲ್ಲ.
ಆದಷ್ಟು ಬೇಗ ನೀ ಬರಬೇಕಲ್ಲ.
ಓ ದೇವ ನೀ ಬೇಗ ಬಾ.

ಬಾವಿಯೊಳಗಿನ ಕಪ್ಪೆಯ ರೀತಿ
ನಮ್ಮ ವ್ಯಾಪ್ತಿಯಲ್ಲಿ ನಿನ್ನ ಹುಡುಕುತಿರುವೆವು.
ಹಲವು ಗೊಂದಲದ ನಡುವೆ
ಬಾಳುತಿರುವ ಮಂದಿಯ ಮುಂದೊಮ್ಮೆ ನೀ ನಿಲ್ಲು ಬಾ.

ಭಕ್ತಿಯು ಹಣವಾಗಿ,ಪ್ರೀತಿಯು ಹಣವಾಗಿ
ಅಕ್ಷರವ ಹಣವಾಗಿ ಕಾಣುವ ಜನರ
ಸರಿದಾರಿಯಲ್ಲಿ ನಡೆಸು ಬಾ
ಓ ದೇವ ನೀ ಬೇಗ ಬಾ

ಗತಿಗೆಟ್ಟವರು ಇಲ್ಲಿ ಹಲವಾರು ಮಂದಿ
ಉಳ್ಳವರ ದರ್ಪಕ್ಕೆ ಅವರೆಲ್ಲ ಬಂದಿ
ಎಲ್ಲರುದಾರಕ್ಕೆ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ವಿಜ್ಞಾನದ ಆವೇಗದಲ್ಲಿ ಯಂತ್ರಗಳ ಸಂತೆ
ಬದುಕಾಗಿದೆ ಇಲ್ಲಿ ನಿರ್ಜೀವ ಯಂತ್ರದಂತೆ
ಎಲ್ಲವೂ ಜಡವಾಗಿ ತೋರುತಿರೇ
ಜೀವಸ್ಪರ್ಶವ ನೀಡೇ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ಹೇಮಾವತಿ

ಹೊಂಬಿಸಿಲ ಹೊಳಪಲಿ ಜುಳುನಾದದ ಜೊಂಪಲಿ ತುಂಬಿ ಹರಿವಳು ನುಣ್ಣಗೆ ಮಲೆಯ ಮೇಲ್ಗಡೆ ಬೀಸುಗಾಳಿಯು ತಣ್ಣಗೆ ದಡದ ಸಂಪಿಗೆ,ಗಂಧ ಕಂಪಿಗೆ,ದುಂಬಿಗಾನದ ಇಂಪಿದೆ ಮಲೆಯ ಮಕ್ಕಳ ನೀರ ಆಟ ಬಟ್ಟೆ ಒಗೆಯುವ ಹೆಂಗಳೆಯರ ಕೂಟದ ನಗುವು ಎಲ್ಲೆಡೆ ಪ್ರತಿಫರಿಸಿದೆ. ಗಾಳವಿಕ್ಕಿ ಕಾದು ಕುಳಿತ ದನಗಾಯಿಯ ಮೊಗದಲಿ ತತ್ವಜ್ಞಾನಿಯ ಹೊಳಪಿದೆ.

ಅ'ಗಣಿತ'

ಎಣಿಸುವುದು ಗಣಿತ ಎಣಿಸಲಾಗದು ಅಗಣಿತ

ಶುಕ್ರವಾರ, ಜನವರಿ 21, 2011

ಕವನ:ಕವಿಗಾಗಿ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ, ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ. ಮೂಗ ಸೆಳೆವ ಹೂ ಸುಗಂಧ ಕವಿಗಾಗಿ.ಜಗವ ಮರೆಸೋ ಜೇನ ಸವಿಯು ಕವಿಗಾಗಿ. ತಂಪ ನೀವ ತಂಗಾಳಿಯ ಸ್ಪರ್ಶ ಕವಿಗಾಗಿ. ಮನ ತಣಿಸುವ ಸೋನೇಮಳೆಯು ಕವಿಗಾಗಿ. ಕವಿಯಿಂದಲೇ ಜಗದಿ ಮಳೆಯು ಕವಿಯಿಂದಲೇ ಜಗದಿ ಬೆಳೆಯು ಕವಿಯಿದ್ದರೆ ಜಗಕ್ಕೆ ಬೆಳೆಯು, ಕವಿಯಿದ್ದರೆ ಜಗಕ್ಕೆ ಬೆಲೆಯು. -ನಂದೀಶ್ ಬಂಕೇನಹಳ್ಳಿ

ಕವನ:ಬಾ ಮಲೆನಾಡಿಗೆ




ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,

ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-

ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ

ಗುರುವಾರ, ಜನವರಿ 20, 2011

ನವಚೈತನ್ಯದ ಗಾನ

ಮೋಡ ಮುಸುಕಿರೇ ಮಂಕು ಕವಿದಿದೇ ಮನಕೆ ಹುರುಪಿಲ್ಲ ಕಾರ್ಯದಲಿ ಗರಬಡಿದಿಹ ಜಗಕೆ ಇಗೀರಲು ನಡೆಯಿತು ಅಚ್ಚರಿಯ ವಿದ್ಯಮಾನ ಧರೆಗಿಳಿಯಿತು ಹೊಸ ಹೊಳಪಿನ ರವಿಕಿರಣ ನರನಾಡಿಗಳು ಈಗ ಚೈತನ್ಯದ ಉಗಮಸ್ಥಾನ ಬಿಡುವಿಲದ ಜಗವೀಗ ಕೆಲಸ ಕಾರ್ಯದಲಿ ಮಗ್ನ